ಹೊಸದಿಗಂತ ವರದಿ, ಕೊಪ್ಪಳ:
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯ ಬಳಿ ಇರುವ ಅಂಜನಾದ್ರಿ ಬೆಟ್ಟಕ್ಕೆ ರಾಜ್ಯದ ರಾಜ್ಯಪಾಲರಾದ ವಾಜುಭಾಯಿ ವಾಲಾ ಅವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ರಾಜ್ಯಪಾಲರ ಸ್ವಗ್ರಾಮವಾಗಿರುವ ಗುಜರಾತ್ನ ಆನಂದ್ ಜಿಲ್ಲೆಯ ಲಂಬಾವೇಲಾದಲ್ಲಿ ನಿರ್ಮಾಣ ಆಗುತ್ತಿರುವ ಆಂಜನೇಯನ ದೇಗುಲಕ್ಕೆ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದ ಶಿಲೆ ಹಾಗೂ ಹನುಮ ಮೂರ್ತಿ ಪ್ರತಿಷ್ಠಾಪಿಸಲಿದ್ದಾರೆ ಈ ಹಿನ್ನೆಲೆ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಶಿಲೆ ಹಾಗೂ ಮೂರ್ತಿಯನ್ನು ತೆಗೆದುಕೊಂಡು ತೆರಳಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ರಾಮಭಕ್ತರು ಎಷ್ಟಿದ್ದಾರೋ, ಅಷ್ಟೇ ಹನುಮಭಕ್ತರೂ ಇದ್ದಾರೆ. ಅಂತೆಯೇ ಹನುಮನಿಗೆ ನಿತ್ಯಪೂಜೆ, ಭಕ್ತಕೋಟಿ ನಡೆಸಿಕೊಡುತ್ತಾರೆ . ನಮ್ಮ ಸ್ವಗ್ರಾಮದಲ್ಲಿ ನಿರ್ಮಾಣ ಆಗುತ್ತಿರುವ ಆಂಜನೇಯನ ದೇವಸ್ಥಾನಕ್ಕೆ ಹನುಮ ಜನಿಸಿದ ಸ್ಥಳ ಅಂಜನಾದ್ರಿಯ ಶಿಲೆ, ಮೂರ್ತಿಯನ್ನು ಒಯ್ಯಲಾಗುತ್ತಿದೆ ಎಂದರು.
ನಿನ್ನ ಕೆಲಸವನ್ನು ನಿಷ್ಕಲ್ಮಶವಾಗಿ ಮಾಡು, ಪ್ರತಿಫಲವನ್ನು ಭಗವಂತನಿಗೆ ಬಿಡು ಎನ್ನುವುದಕ್ಕೆ ಮಾರುತಿ ಸಾಕ್ಷಿ . ಅದರಂತೆ ಪ್ರತಿಯೋಬ್ಬರು ನಡೆದುಕೊಂಡರೆ ಯಾವ ಕಷ್ಟಗಳು ಬರಲಾರವು ಎಂದು ಹೇಳಿದರು.
ಅಂಜನಾದ್ರಿ ಬೆಟ್ಟದ ವಿವಾದದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇಲ್ಲಿನ ಅಂಜನಾದ್ರಿ ಪೂಜಾ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಲಾರೆ. ಇಲ್ಲಿನ ಆಡಳಿತ ಅದನ್ನು ಬಗೆ ಹರಿಸುತ್ತದೆ ಎಂದರು.