ಉಡುಪಿ: ಸೇವಾ ಹೀ ಸಂಘಟನೆ ಪರಿಕಲ್ಪನೆಯಡಿ ಸೆ.14ರಿಂದ ಆರಂಭವಾಗಿರುವ ವಿವಿಧ ಕಾರ್ಯಕ್ರಮಗಳು ಅಕ್ಟೋಬರ್ 2ರವರೆಗೆ ನಡೆಯಲಿವೆ. ಸೇವಾ ಸಪ್ತಾಹ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಹಾಗೂ ಮಹಾತ್ಮಾಗಾಂಧಿ ಜಯಂತಿ ಸಂಬಂಧಿಸಿ ಜಿಲ್ಲೆಯಲ್ಲಿ ನಾನಾ ಕಾರ್ಯಕ್ರಮಗಳು ಆಯೋಜನೆಗೊಂಡಿವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಅಧ್ಯಕ್ಷರು ಕರೆ ಕೊಟ್ಟಂತೆ ಸೆ. 14ರಿಂದ ಅ.2ರವರೆಗೆ ನಡೆಯುವ ಸೇವಾ ಸಪ್ತಾಹ ಅಂಗವಾಗಿ ಸಾಮಾಜಿಕ ಕಾರ್ಯ ಚಟುವಟಿಕೆಗಳು ನಡೆಯಲಿವೆ ಎಂದರು.
ಜಿಲ್ಲೆಯ ಪ್ರತಿ ಮಂಡಲದಲ್ಲಿ 70 ಅಂಗವಿಕಲರಿಗೆ ಕೃತಕ ಅಂಗ ಜೋಡಣೆ, ಉಚಿತ ಕನ್ನಡಕ, ಬಡ ಕಾಲೊನಿಗಳಿಗೆ ತೆರಳಿ ಹಣ್ಣು ವಿತರಣೆ, ಕೋವಿಡ್ ಪೀಡಿತರಿಗೆ ಪ್ಲಾಸ್ಮಾ ದಾನ, ಯುವ ಮೋರ್ಚಾ ವತಿಯಿಂದ ರಕ್ತದಾನ, ಪ್ರತಿ ಬೂತ್ನಲ್ಲಿ ವೃಕ್ಷಾರೋಪಣ ಹಾಗೂ ಪರಿಸರ ಸಂರಕ್ಷಣೆ ಸಂಕಲ್ಪ, ಹಳ್ಳಿಯಲ್ಲಿ ಸ್ವಚ್ಛತಾ ಅಭಿಯಾನ, ಪ್ಲಾಸ್ಟಿಕ್ ನಿಷೇಧ ಸಂಕಲ್ಪ, ಜಿಲ್ಲಾ ಕೇಂದ್ರದ ಸಾರ್ವಜನಿಕ ಸ್ಥಳದಲ್ಲಿ ಸ್ವಚ್ಛತಾ ಕಾರ್ಯಕ್ರಮ, ವರ್ಚುವಲ್ ಸಮಾವೇಶ ಸೇರಿದಂತೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.
ಅಕ್ಟೋಬರ್ 2ರಂದು ಗಾಂಧಿ ಜಯಂತಿ ಅಂಗವಾಗಿ ಗಾಂಧಿ ಸಂಕಲ್ಪ ಯಾತ್ರೆ ಕಾರ್ಯಕ್ರಮ ನಡೆಸಲಾಗುವುದು. ಗ್ರಾಮ ಪಂಚಾಯತ್ ಚುನಾವಣೆಗೆ ಸಂಬಂಧಿಸಿ ಈ ಬಾರಿ 135 ಗ್ರಾ.ಪಂ. ಗೆಲುವು ಸಾಧಿಸುವ ನಿಟ್ಟಿನಲ್ಲಿ ಎಲ್ಲ ಬೂತ್ ಮಟ್ಟದಲ್ಲಿ ತಯಾರಿ ನಡೆಸಲಾಗುತ್ತಿದೆ ಎಂದು ಸುರೇಶ್ ನಾಯಕ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀಶ ನಾಯಕ್ ಪೆರ್ಣಂಕಿಲ, ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವೀಣಾ ಶೆಟ್ಟಿ, ಶ್ರೀನಿಧಿ ಹೆಗ್ಡೆ ಉಪಸ್ಥಿತರಿದ್ದರು.