ಮೈಸೂರು: ಆತ್ಮನಿರ್ಭರರಾಗೋಣ ಚೀನಾ ವಿರುದ್ಧ ಪರೋಕ್ಷ ಜನಸಂಗ್ರಾಮ ಮಾಡೋಣ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಭಾರತದ ಸೈನಿಕರನ್ನು ಮೋಸದಿಂದ ಚೀನಾ ಸೈನಿಕರು ಹತ್ಯೆ ಮಾಡಿರುವುದು ಅಕ್ಷಮ್ಯ. ಇದಕ್ಕೆ ನಮ್ಮ ಯೋಧರು ಚೀನಾದ ಸೈನಿಕರನ್ನು ಬಲಿ ಪಡೆಯುವ ಮೂಲಕ ಪ್ರತೀಕಾರ ಪಡೆದಿದ್ದಾರೆ. ಈಗ ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನ ವಾತಾವರಣ ಕಂಡುಬರುತ್ತಿದೆ. ಯುದ್ಧ ಆಗದಿರಲಿ ಎಂದು ಆಶಿಸೋಣವಾದರೂ, ಚೀನಾ ತನ್ನ ಉದ್ದಟನತನವನ್ನು ಹೀಗೆಯೇ ಪ್ರದರ್ಶಿಸಿದರೆ ಭಾರತ ಕಠಿಣ ನಿಲುವು ತೆಗೆದುಕೊಳ್ಳುವುದು ಅನಿವಾರ್ಯ. ಅದೇನೇ ಇರಲಿ ಈಗ ನಾವು-ನೀವು ಚೀನಾ ವಿರುದ್ಧ ಜನಸಂಗ್ರಾಮ ಮಾಡಲು ಇದು ಸಕಾಲ. ಅದಕ್ಕೆ ಆತ್ಮನಿರ್ಭರ ಎಂಬ ಆಯುಧ ಬಳಸೋಣ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗಷ್ಟೇ ಸ್ವಾವಲಂಬಿ ಭಾರತದ ಬಗ್ಗೆ ಮಾತನಾಡಿದ್ದರು. ಅದಕ್ಕಾಗಿ ಆತ್ಮನಿರ್ಭರ ಭಾರತ ನಿರ್ಮಾಣವಾಗಲಿ ಎಂದು ಕರೆ ಕೊಟ್ಟಿದ್ದರು. ಈಗ ನಮ್ಮ ಭಾರತದಲ್ಲಿ, ನಮ್ಮ ನಮ್ಮ ಮನೆಗಳಲ್ಲಿ ಚೀನಾದ ಅದೆಷ್ಟೋ ಉತ್ಪನ್ನಗಳು ಹಾಸುಹೊಕ್ಕಾಗಿವೆ. ಇನ್ನಾದರೂ ಚೀನಾ ಸಹಿತ ವಿದೇಶಿ ಉತ್ಪನ್ನಗಳಿಗೆ ಆಕರ್ಷಿತರಾಗೋದನ್ನು ಬಿಡೋಣ. ನಮ್ಮ ದೇಶೀಯ ಉತ್ಪನ್ನಗಳನ್ನು ಖರೀದಿಸುವತ್ತ ಗಮನಹರಿಸೋಣ. ಈ ಮೂಲಕ ಚೀನಾ ಮೇಲೆ ನಾವು ಭಾರತೀಯರು ಪರೋಕ್ಷ ಯುದ್ಧ ಸಾರೋಣ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಮೊದಲಿನಿಂದಲೂ ಮೇಕ್ ಇನ್ ಇಂಡಿಯಾಕ್ಕೆ ಒತ್ತು ನೀಡುತ್ತಾ ಬಂದಿದ್ದಾರೆ. ಈ ಮೂಲಕ ಸ್ವಾಭಿಮಾನಿ ಭಾರತ ನಿರ್ಮಾಣ ಮಾಡುವಲ್ಲಿ ಶ್ರಮ ವಹಿಸುತ್ತಿದ್ದಾರೆ. ನಾವೂ ಸಹ ದೇಶೀಯವಾಗಿ ಹಾಗೂ ಪ್ರಾದೇಶಿಕವಾಗಿ ತಯಾರಾಗುವ ಭಾರತೀಯ ಉತ್ಪನ್ನಗಳನ್ನು ಹೆಚ್ಚು ಹೆಚ್ಚು ಖರೀದಿ ಮಾಡುವ ಮೂಲಕ ಮೇಕ್ ಇನ್ ಇಂಡಿಯಾವನ್ನು ಬೆಂಬಲಿಸೋಣ. ಸ್ವಾಭಿಮಾನಿ ಭಾರತವನ್ನು ಕಟ್ಟೋಣ. ಇದನ್ನೊಂದು ಜನಸಂಗ್ರಾಮ ಮಾದರಿಯಲ್ಲಿ ಹೋರಾಟ ಮಾಡೋಣ.
ಹುತಾತ್ಮ ಯೋಧರಿಗೆ ಕೋಟಿ ಕೋಟಿ ನಮನಗಳನ್ನು ಸಲ್ಲಿಸುತ್ತಾ, ಅವರ ಕುಟುಂಬಗಳಿಗೆ ದುಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಬೇಡಿಕೊಳ್ಳುವೆ ಎಂದು ತಿಳಿಸಿದ್ದಾರೆ.