ಹೊಸ ದಿಗಂತ ವರದಿ ಉಡುಪಿ:
ಮಂತ್ರಾಲಯದಲ್ಲಿ ಪ್ರತೀ ಹನ್ನೆರಡು ವರ್ಷಗಳಿಗೊಮ್ಮೆ ಬರುವ ತುಂಗಭದ್ರಾ ಪುಷ್ಕರ ಪುಣ್ಯ ಸ್ನಾನ ನಿನ್ನೆ ಆರಂಭವಾಗಿದ್ದು, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ವಿಶ್ವಸ್ಥರೂ ಆಗಿರುವ ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಇಂದು ಪುಣ್ಯ ಸ್ನಾನಗೈದರು.
ಪೇಜಾವರ ಶ್ರೀಗಳು, ಮಂತ್ರಾಲಯದ ಶ್ರೀಸುಬುಧೇಂದ್ರತೀರ್ಥ ಸ್ವಾಮೀಜಿ ಮತ್ತು ತಮ್ಮ ಶಿಷ್ಯರೊಂದಿಗೆ ಪವಿತ್ರ ತುಂಗಭದ್ರಾ ಪುಷ್ಕರ ಸ್ನಾನ ಮಾಡಿದರು. ಬಳಿಕ ಗುರು ಪ್ರಹ್ಲಾದ ರಾಯರ ದರ್ಶನ ಪಡೆದು, ಅಯೋಧ್ಯೆಯ ರಾಮಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನೆರವೇರುವಂತೆ ಗುರುರಾಯರಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಅಲ್ಲದೇ ಕೆಲ ಹೊತ್ತು ರಾಯರ ಸನ್ನಿಧಿಯ ಮುಂಭಾಗ ವಿದ್ಯಾರ್ಥಿಗಳಿಗೆ ಶ್ರೀಮನ್ನ್ಯಾಯ ಸುಧಾ ಪಾಠ ಮಾಡಿದರು. ಪೇಜಾವರ ಶ್ರೀಗಳನ್ನು ಶ್ರೀಮಠದ ಸಾಂಪ್ರದಾಯಿಕ ಗೌರವಗಳೊಂದಿಗೆ ಬರಮಾಡಿಕೊಂಡ ಶ್ರೀಸುಬುಧೇಂದ್ರತೀರ್ಥರು ಮಂತ್ರಾಲಯ ಮಠದ ಗೌರವವನ್ನು ಸಲ್ಲಿಸಿದರು. ಜೊತೆಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯಗಳ ಕುರಿತು ಸಮಾಲೋಚನೆ ನಡೆಸಿದರು.