ಮಂಡ್ಯ: ಪ್ರೊ.ರಂಗರಾಜನ್ ವರದಿಯಂತೆ ಕಬ್ಬಿನ ಉಪಉತ್ಪನ್ನಗಳ ಶೇ.70 ರಷ್ಟು ಲಾಭಾಂಶವನ್ನು ರೈತರಿಗೆ ನೀಡಲು ಬದ್ಧನಾಗಿದ್ದೇನೆ ಎಂದು ಉದ್ಯಮಿ, ಶಾಸಕ ಮುರುಗೇಶ್ ನಿರಾಣಿ ಭರವಸೆ ನೀಡಿದರು.
ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಮಂಗಳವಾರ ನಡೆದ ಪಿಎಸ್ಎಸ್ಕೆಯ ಸಾಮಥ್ರ್ಯವನ್ನು 5 ಸಾವಿರ ಟಿಸಿಡಿಗೆ ವಿಸ್ತರಣೆ ಮಾಡುವ ಭೂಮಿಪೂಜೆ ಹಾಗೂ ಬಾಯ್ಲರ್ ಪ್ರದೀಪನ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಮೈಸೂರು ಭಾಗದಲ್ಲಿ ಎಕರೆಗೆ 50 ರಿಂದ 60 ಟನ್ ಕಬ್ಬನ್ನು ಬೆಳೆಯಲಾಗುತ್ತಿದೆ. ಕಬ್ಬಿನ ಇಳುವರಿ ಪ್ರಮಾಣ ಶೇ.8 ರಷ್ಟು ಮಾತ್ರ ಇದೆ. ಆದರೆ, ನಮ್ಮ ಭಾಗದಲ್ಲಿ 60-80 ಟನ್ ಬೆಳೆಯುವಂತಹ ಕಬ್ಬಿನ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಇಳುವರಿ ಶೇ.12 ರಷ್ಟಿದೆ. ಮಂಡ್ಯ ಹಾಗೂ ಮೈಸೂರು ಭಾಗದ ರೈತರಿಗೆ ಅತ್ಯಾಧುನಿಕ ಉತ್ತಮ ಕಬ್ಬಿನ ತಳಿಯನ್ನು ಪರಿಚಯಸಲಾಗುವುದು ಎಂದು ಹೇಳಿದರು.
ಪಿಎಸ್ಎಸ್ಕೆಯಿಂದ ವಿಮಾನಗಳಿಗೆ ಇಂಧನ
ಕಬ್ಬಿನಿಂದ ಸಕ್ಕರೆ, ಎಥೆನಾಲ್, ಕಾಕಾಂಬಿ ಸೇರಿದಂತೆ ಹಲವು ಉಪ ಉತ್ಪನ್ನಗಳನ್ನು ಉತ್ಪಾದಿಸಲಾಗುತ್ತಿದೆ. ಮುಂದಿನ ಎರಡು ವರ್ಷಗಳಲ್ಲಿ ಪಿಎಸ್ಎಸ್ಕೆಯಲ್ಲಿ 9 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ, ವಿಮಾನಗಳಿಗೆ ಬಳಸುವ ಇಂಧನವನ್ನು ಉತ್ಪಾದಿಸುವ ಗುರಿಯನ್ನು ಹೊಂದಲಾಗಿದ್ದು, ಆಗ ರೈತರಿಗೆ ಹೆಚ್ಚಿನ ಬೆಲೆ ದೊರೆಯಲಿದೆ ಎಂದರು.