ಮಂಗಳೂರು: ಕೊರೋನಾ ಭೀತಿ ನಡುವೆಯೂ ಮಂಗಳವಾರ ನಡೆದ ರಾಜ್ಯ ರಾಜಧಾನಿ ಬೆಂಗಳೂರಿನ ರಾಜರಾಜೇಶ್ವರಿನಗರ ವಿಧಾನ ಸಭಾ ಕ್ಷೇತ್ರ ಹಾಗೂ ತುಮಕೂರಿನ ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದೆ.
ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆದ ಮತದಾನದಲ್ಲಿ ಶಿರಾದಲ್ಲಿ ಮತದಾರರು ಮತದಾನಕ್ಕೆ ಉತ್ಸಾಹ ತೋರಿದರೇ, ರಾಜರಾಜೇಶ್ವರಿನಗರದಲ್ಲಿ ಕೊರೋನಾ ಸೋಂಕಿನ ಭೀತಿಯ ಹಿನ್ನಲೆಯಿಂದಲೋ ಏನೋ ನಿರುತ್ಸಾಹದೊಂದಿಗೆ ಮತದಾನ ನಡೆದಿದೆ.
ಆರ್ಆರ್ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಕುಸುಮಾ, ಬಿಜೆಪಿಯಿಂದ ಮುನಿರತ್ನ ಹಾಗೂ ಜೆಡಿಎಸ್ನಿಂದ ಕೃಷ್ಣಮೂರ್ತಿ ಸ್ಪರ್ಧಿಸಿದ್ದರೆ. ಶಿರಾದಲ್ಲಿ ಕಾಂಗ್ರೆಸ್ನಿಂದ ಟಿ.ಬಿ ಜಯಚಂದ್ರ, ಬಿಜೆಪಿಯಿಂದ ರಾಜೇಶ್ ಗೌಡ ಹಾಗೂ ಜೆಡಿಎಸ್ ನ ಅಮ್ಮಾಜಮ್ಮ ಅಭ್ಯರ್ಥಿಗಳಾಗಿದ್ದಾರೆ.
ಎರಡು ಕ್ಷೇತ್ರಗಳಿಂದ, ಒಟ್ಟು 1,008 ಬೂತ್ ಗಳನ್ನು ಸ್ಥಾಪಿಸಲಾಗಿತ್ತು. ಎಲ್ಲಾ ಬೂತ್ ಗಳಲ್ಲೂ ಥರ್ಮಲ್ ಸ್ಕ್ಯಾನರ್ ಮತ್ತು ಹ್ಯಾಂಡ್ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿತ್ತು. ಕೊರೋನಾ ಪಾಸಿಟಿವ್ ಇದ್ದವರು ಕೂಡ ಇಂದು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಈ ಮೂಲಕ ಉಪ ಚುನಾವಣೆಯ ಮತದಾನ ಮುಕ್ತಾಯಗೊಂಡು, ಮತಯಂತ್ರಗಳಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದೆ. ನವೆಂಬರ್ 10ರಂದು ನಡೆಯಲಿರುವ ಮತಏಣಿಕೆಯಂದು ಯಾರ ಕೊರಳಿಗೆ ವಿಜಯದ ಸರಮಾಲೆ ಬೀಳುವುದೋ ಎಂಬುದನ್ನು ಕಾದು ನೋಡಬೇಕಿದೆ.
ಎಷ್ಟು ಗಂಟೆಗೆ ಎಷ್ಟಿತ್ತು ಮತದಾನ ಪ್ರಮಾಣ
ಶಿರಾ ಉಪ ಚುನಾವಣೆಯಲ್ಲಿ ಬೆಳಿಗ್ಗೆ 9 ಗಂಟೆಯ ವೇಳೆಗೆ ಶೇ.8.25ರಷ್ಟು ಮತದಾನ ದಾಖಲಾದರೆ , ಆರ್ ಆರ್ ನಗರದಲ್ಲಿ ಶೇ.6.27ರಷ್ಟು ದಾಖಲಾಗಿತ್ತು.
ಬಳಿಕ 11 ಗಂಟೆಯ ವೇಳೆಗೆ ಶಿರಾ ಕ್ಷೇತ್ರದಲ್ಲಿ 23.63ರಷ್ಟು ಮತದಾನ ನಡೆದರೆ, ಆರ್ ಆರ್ ನಗರದಲ್ಲಿ ಶೇ.14.44ರಷ್ಟು ಮತದಾನ ನಡೆಯಿತು.
ಇನ್ನೂ ಮಧ್ಯಾಹ್ನ 1 ಗಂಟೆಯ ವೇಳೆಗೆ ಶಿರಾ ಉಪ ಚುನಾವಣೆಯಲ್ಲಿ ಮತದಾನ ಶೇ.44.13ರಷ್ಟು ದಾಖಲಾಗಿತ್ತು. ಆರ್ ಆರ್ ನಗರದಲ್ಲಿ ಶೇ. 26.58ರಷ್ಟು ಮತದಾನ ನಡೆದಿದೆ.
ಮಧ್ಯಾಹ್ನ 3 ಗಂಟೆಯ ವೇಳೆಗೆ ಶಿರಾ ಶೇ.62.1ರಷ್ಟು, ಆರ್ ಆರ್ ನಗರದಲ್ಲಿ ಶೇ.39.15ರಷ್ಟು ಮತದಾನ ನಡೆಯಿತು.
ಸಂಜೆ 5 ಗಂಟೆಗೆ ವೇಳೆ ಶಿರಾದಲ್ಲಿ ಶೇ.77.34ರಷ್ಟು ಆಗಿದ್ದರೇ, ಆರ್ ಆರ್ ನಗರದಲ್ಲಿ ಶೇ.39.15ರಷ್ಟು ಆಗಿತ್ತು.
ಇದರ ಬಳಿಕ ಅಂತಿಮ ಹಂತದಲ್ಲಿ ಆರ್ ಆರ್ ನಗರದಲ್ಲಿ ಕೊರೋನಾ ಸೋಂಕಿತರಿಗೂ ಮತದಾನಕ್ಕೆ ಅವಕಾಶ ನೀಡಿದ್ರೂ ನಿರುತ್ಸಾಹದೊಂದಿಗೆ ಮತದಾನ ಮುಂದುವರೆದು ಸಂಜೆ 6 ಗಂಟೆ ವೇಳೆಗೆ ಶೇ.45.24ರಷ್ಟು ನಡೆದಿದೆ. ಇತ್ತ ಶಿರಾದಲ್ಲಿ ಶೇ.82.31ರಷ್ಟು ಮತದಾನವಾಗಿದೆ. ಈ ಮೂಲಕ ಉಪ ಚುನಾವಣೆಯ ಮತದಾನ ಮುಕ್ತಾಯಗೊಂಡು, ಮತಯಂತ್ರಗಳಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದೆ.