ಹೊಸ ದಿಗಂತ ವರದಿ, ಮೈಸೂರು:
ಮೈಸೂರು ಮತ್ತು ಚಾಮರಾಜನಗರಜಿಲ್ಲಾ ಸಹಕಾರಕೇಂದ್ರ ಬ್ಯಾಂಕ್ ವತಿಯಿಂದ 2021-22 ಸಾಲಿನಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಅರ್ಹ ರೈತ ಫಲಾನುಭವಿಗಳಿಗೆ ಕಡಿಮೆ ಬಡ್ಡಿದರದಲ್ಲಿ ವಾರ್ಷಿಕ ಬೆಳೆ ಸಾಲ ನಿಗಧಿ ಮಾಡುವ ಸಂಬoಧ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಸಭೆ ನಡೆಯಿತು.
ಈ ವೇಳೆ ಪ್ರಸಕ್ತ ಸಾಲಿನಲ್ಲಿರೈತರಿಗೆ ನೀಡಬಹುದಾದ ಬೆಳೆ ಸಾಲ ಕುರಿತಂತೆ ಮೈಸೂರು ಮತ್ತುಚಾಮರಾಜನಗರಜಿಲ್ಲೆಯ ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆಇಲಾಖೆಯು ಶಿಫಾರಸ್ಸು ಮಾಡಿದ್ದ ಅಂದಾಜು ವೆಚ್ಚವನ್ನು ಪರಿಶೀಲಿಸಿ ವಿವಿಧ ಬೆಳೆಗಳನ್ನು ಬೆಳೆಯಲು ತಗಲುಬಹುದಾದ ವೆಚ್ಚವನ್ನು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನಿಗಧಿ ಮಾಡಿದರು.
ಎರಡು ಜಿಲ್ಲೆಯ ರೈತರು ಹೆಚ್ಚು ಬೆಳೆಯುವ ಬೆಳೆಗಳಾದ ಭತ್ತ, ರಾಗಿ, ಮುಸುಕಿನ ಜೋಳ, ಸೂರ್ಯಕಾಂತಿ, ಬಾಳೆ, ಅರಿಸಿಣ, ಶುಂಠಿ, ಮೆಣಸಿನಕಾಯಿ, ಟೊಮ್ಯಾಟೊ, ಮಾವು, ಸಪೋಟ, ಕ್ಯಾರೆಟ್, ಉದ್ದು, ಬಟಾಣಿ ಸೇರಿದಂತೆ ಮುಂತಾದ ಬೆಳೆಗಳಿಗೆ ಎಕ್ಕರೆವಾರು ತಗುಲುವ ವೆಚ್ಚವನ್ನು ರೈತರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ನಿಗಧಿಪಡಿಸಿದರು.
ಬಳಿಕ ಮಾತನಾಡಿದ ಅವರು, ಕಳೆದ ಬಾರಿ ನೀಡಿದ್ದ ಸಾಲಕ್ಕಿಂತ ಈ ಬಾರಿ ಕಡ್ಡಾಯವಾಗಿ ಶೇ.10 ರಷ್ಟು ಹಾಗೂ ಅದಕ್ಕಿಂತ ಹೆಚ್ಚು ಹೇರಿಸಲಾಗಿದೆ. ಅರ್ಹರೈತ ಫಲಾನುಭವಿಗಳಿಗೆ ಸಾಲವು ಅನುಕೂಲವಾಗುವಂತೆ ಅಧಿಕಾರಿಗಳು ಕ್ರಮವಹಿಸಬೇಕು. ಸಣ್ಣ ಹಾಗೂ ಅತೀ ಸಣ್ಣ ರೈತರನ್ನು ಪ್ರೊತ್ಸಾಹಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಕೃಷಿ ಜಂಟಿ ನಿರ್ದೇಶಕ ಮಹಂತೇಶಪ್ಪ, ತೋಟಗಾರಿಕೆ ಉಪ ನಿರ್ದೇಶಕರು ದ್ರೇಶ್, ಎಂಸಿಡಿಸಿ ಬ್ಯಾಂಕ್ ಸಿಇಒ ಜನಾರ್ಧನ್, ಪ್ರಧಾನ ವ್ಯವಸ್ಥಾಪಕ ಶಶಿಧರ್, ಉಪ ಪ್ರಧಾನ ವ್ಯವಸ್ಥಾಪಕ ರವಿ, ಹಿರಿಯ ಸಹಾಯಕ ಸತೀಶ್ ಇನ್ನಿತರರು ಉಪಸ್ಥಿತರಿದ್ದರು.