ಮೈಸೂರು: ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿಗೆ ರೈತರ ವಿರೋಧವಿಲ್ಲ, ಆದರೆ ಮಸೂದೆಗಳಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಕೆಲ ರೈತರ ಹೆಸರಿನ ಸಂಘಟನೆಗಳು ರಾಜಕೀಯ ಪ್ರೇರಿತ ಹೋರಾಟ ನಡೆಸುತ್ತಿವೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಕಿಡಿಕಾರಿದರು.
ಭಾನುವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಪಿಎಂಸಿ ತಿದ್ದುಪಡಿ ಮಸೂದೆಯಿಂದ ರೈತರಿಗೆ ಲಾಭವಾಗಲಿದೆ. ನಾನು ಎಲ್ಲಾ ಕಡೆ ಪ್ರವಾಸ ಮಾಡಿದ್ದೇನೆ, ಎಲ್ಲೂ ರೈತರು ಈ ತಿದ್ದುಪಡಿ ಮಸೂದೆಯಿಂದ ನಮಗೆ ಅನ್ಯಾಯವಾಗುತ್ತದೆ ಎಂದು ಹೇಳಿಲ್ಲ. ಆದರೆ ಕೆಲ ರೈತರ ಹೆಸರಿನ ಸಂಘಟನೆಗಳು ರಾಜಕೀಯ ಪ್ರೇರಿತವಾಗಿ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿವೆ.
ತಿದ್ದುಪಡಿ ಮಸೂದೆ ಬಗ್ಗೆ ರೈತರ ವಿರೋಧ ಇಲ್ಲ. ರೈತಮುಖಂಡರಿಗೆ ಇದರ ಬಗ್ಗೆ ವಿರೋಧವಿದೆ. ರಾಜಕಾರಣಕ್ಕಾಗಿ ತಿದ್ದುಪಡಿ ಕಾಯ್ದೆ ವಿರೋಧ ಮಾಡಲಾಗುತ್ತಿದೆ ಎಂದು ಟೀಕಿಸಿದರು.
ಸೋಮವಾರ ಕರ್ನಾಟಕ ಬಂದ್ ಗೆ ರೈತರು ಕರೆ ಕೊಟ್ಟಿಲ್ಲ. ಕೆಲವು ಸಂಘಟನೆಗಳು ಬಂದ್ ಗೆ ಕರೆ ಕೊಟ್ಟಿವೆ. ಕಾಯ್ದೆಯಿಂದ ರೈತರಿಗೆ ಅನಕೂಲವಾಗಲಿದೆ. ಇದನ್ನು ಸಿಎಂ ಯಡಿಯೂರಪ್ಪ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದಾರೆ. ರಾಜಕಾರಣಕ್ಕಾಗಿ ಮಸೂದೆಯನ್ನು ವಿರೋಧ ಮಾಡಲಾಗುತ್ತಿದೆ. ಪರಿಷತ್ನಲ್ಲಿ ಎಪಿಎಂಸಿ ಬಿಲ್ ಮಂಡನೆಯಾಗಿಲ್ಲ. ಅದರ ಬಗ್ಗೆ ಚರ್ಚೆಯೂ ಆಗಿಲ್ಲ ಎಂದರು. ಕಾಟಚಾರಕ್ಕೆ ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಕಾಟಚಾರಕ್ಕೆ ಅವಿಶ್ವಾಸ ನಿರ್ಣಯ ಮಂಡನೆ
ಮಾಡಿದ್ದಾರೆ. ನಿಜವಾಗಿಯೂ ಸರ್ಕಾರದ ವಿರುದ್ದ ಇದ್ದಿದ್ದರೆ ಗಂಭೀರವಾಗಿ ಪರಿಗಣಿಸಿ ಚರ್ಚೆ ಮಾಡುತ್ತಿದ್ದರು. ಡಿವೈಡ್ ಅಂಡ್ ರೂಲ್ ನಿಯಮದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಬೇಕಿತ್ತು. ಆದರೆ ಅವರು ಸುಮ್ಮನೆ ಕಾಟಚಾರಕ್ಕೆ ಧ್ವನಿಮತದ ಮೂಲಕ ಕೇಳಿದ್ದಾರೆ. ಆ ಅವಿಶ್ವಾಸ ನಿರ್ಣಯ ಮಂಡನೆಗೆ ಯಾವುದೇ ಬೆಲೆ ಇಲ್ಲ ಎಂದು ಎಂದು ಲೇವಡಿ ಮಾಡಿದರು.