ಕುಂಬ್ಡಾಜೆ : ಚಿನ್ನ ಕಳ್ಳ ಸಾಗಣೆ, ಪಿ ಎಸ್ ಸಿ ಹಿಂಬಾಗಿಲು ನೇಮಕಾತಿ, ಲೈಫ್ ಮಿಷನ್ ಭ್ರಷ್ಟಾಚಾರಗಳೇ ಮೊದಲಾದ ಹಗರಣಗಳಲ್ಲಿ ಮುಳುಗಿರುವ ಸಿ ಪಿ ಎಂ ನೇತೃತ್ವದ ಎಲ್ ಡಿ ಎಫ್ ಸರಕಾರದ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ಹಾಗೂ ಸಚಿವರಾದ ಕೆ ಟಿ ಜಲೀಲ್ ಕೂಡಲೇ ರಾಜೀನಾಮೆ ನೀಡಬೇಕೆಂದು ಬಿಜೆಪಿ ಕಾಸರಗೋಡು ಮಂಡಲ ಪ್ರಧಾನ ಕಾರ್ಯದರ್ಶಿ ಸುಕುಮಾರನ್ ಕುದ್ರೆಪ್ಪಾಡಿ ಆಗ್ರಹಿಸಿದರು.
ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿಯ ಆಶ್ರಯದಲ್ಲಿ ಇಂದು ಮಾರ್ಪನಡ್ಕದಲ್ಲಿ ನಡೆದ ನಿಂತು ಸಮರವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಿ ಪಿ ಎಂ ನೇತಾರರು ಇಂದು ತಲೆಗೆ ಮುಂಡು ಹಾಕಿ ನಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಯು ಡಿ ಎಫ್ ಹಾಗೂ ಎಲ್ ಡಿ ಎಫ್ ಈ ಎರಡು ರಂಗಗಳು ಭ್ರಷ್ಟಾಚಾರ ಹಾಗೂ ವಂಚನೆ ನಡೆಸುವಲ್ಲಿ ತಾವು ಮುಂದು ತಾವು ಮುಂದು ಎಂದು ಪೈಪೋಟಿ ನಡೆಸುತ್ತಿದೆ.ಇದು ಕೇರಳಕ್ಕೆ ಶಾಪವಾಗಿದೆ ಎಂದೂ ಅವರು ಆರೋಪಿಸಿದರು.
ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿ ಉಪಾಧ್ಯಕ್ಷರಾದ ಬಿ ರಾಜೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತಾಡಿ ಭ್ರಷ್ಟಾಚಾರ, ವಂಚನೆ, ಬಲಾತ್ಕಾರ ಕೃತ್ಯ, ಭಯತ್ಪಾಧಕರ ಆಶ್ರಯ ಕೇಂದ್ರವಾಗಿ ಕೇರಳವನ್ನು ಮಾರ್ಪಡಿಸಿದ ಪಿಣರಾಯಿ ವಿಜಯನ್ ಸರಕಾರದ ಆಡಳಿತದಿಂದಾಗಿ ಕೇರಳದ ಜನತೆ ದೇಶದಲ್ಲೇ ತಲೆತಗ್ಗಿಸುವಂತಾಗಿದೆ, ಭ್ರಷ್ಟಾಚಾರದ ಹೊಣೆಹೊತ್ತು ಮುಖ್ಯಮಂತ್ರಿ ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.