ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಶಾಂಘೈ ಸಹಕಾರ ಸಂಸ್ಥೆ ವೇದಿಕೆ(ಎಸ್ ಸಿಒ)ಯಲ್ಲಿ ದ್ವಿಪಕ್ಷೀಯ ವಿಚಾರಗಳನ್ನು ಎತ್ತಬಾರದು ಎಂದು ಹೇಳುವ ಮೂಲಕ ರಷ್ಯಾ ಭಾರತವನ್ನು ಬಹಿರಂಗವಾಗಿ ಬೆಂಬಲಿಸಿದ್ದು, ಪಾಕ್ ಗೆ ತೀವ್ರ ಹಿನ್ನಡೆ ಉಂಟಾಗಿದೆ.
ಸುದ್ದಿಮೂಲ ಪ್ರಕಟಿಸಿರುವ ವರದಿಯ ಪ್ರಕಾರ ಮುಂಬರುವ ಎಸ್ ಸಿಒ ಸಭೆಯಲ್ಲಿ ದ್ವಿಪಕ್ಷೀಯ ವಿಷಯಗಳನ್ನು ಪ್ರಸ್ತಾಪಿಸುವಂತಿಲ್ಲ ಎಂದು ರಷ್ಯಾ ಹೇಳಿದೆ.
ದೆಹಲಿಯಲ್ಲಿರುವ ರಷ್ಯಾದ ಡೆಪ್ಯುಟಿ ರಾಯಭಾರಿ ರೋಮನ್ ಎನ್ ಬಾಬುಷ್ಕಿನ್ ಅವರು, ವಿಯೋನ್ ಪ್ರಶ್ನೆಗೆ ಉತ್ತರಿಸುತ್ತ, ಇದು ಎಸ್ ಸಿಒ ಚಾರ್ಟರ್ ಮತ್ತು ಎಸ್ ಸಿಒ ಮೂಲ ದಾಖಲೆಗಳ ಭಾಗವಾಗಿದ್ದು, ಇಲ್ಲಿ ದ್ವಿಪಕ್ಷೀಯ ವಿಚಾರ ಎಳೆದು ತರುವುದು ನಮ್ಮ ಅಜೆಂಡಾದಲ್ಲಿ ಇಲ್ಲ. ಇದನ್ನು ಎಲ್ಲಾ ಸದಸ್ಯ ರಾಷ್ಟ್ರಗಳು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು ಎಂದು ಹೇಳಿದ್ದರು.
ಎಸ್ ಸಿಒ ಸಭೆಯಲ್ಲಿ ದ್ವಿಪಕ್ಷೀಯ ವಿಷಯಗಳನ್ನು ಪ್ರಸ್ತಾಪಿಸುವುದು ನಿಯಮ ಹಾಗೂ ಎಸ್ ಸಿಒ ಪಾಲಿಸುತ್ತಿರುವ ಶಿಸ್ತಿನ ಉಲ್ಲಂಘನೆ ಎಂಬುದು ಭಾರತದ ನಿಲುವಾಗಿದೆ. ಈ ನಿಲುವಿಗೆ ಭಾರತ ಬದ್ಧವಾಗಿದ್ದು, ಭಾರತಕ್ಕೆ ರಷ್ಯಾ ಬೆಂಬಲಿಸಿದೆ.
ಕಳೆದ ಬಾರಿ ವರ್ಚ್ಯುಯಲ್ ಎಸ್ ಸಿಒ ಸಭೆಯಲ್ಲಿ ಪಾಕಿಸ್ತಾನ ಭಾರತ-ಪಾಕಿಸ್ತಾನದ ದ್ವಿಪಕ್ಷೀಯವನ್ನು ಪ್ರಸ್ತಾಪಿಸಿತ್ತು, ಅಷ್ಟೇ ಅಲ್ಲದೇ ಪಾಕ್ ಭೂಪಟದಲ್ಲಿ ಕಾಶ್ಮೀರವನ್ನು ಚಿತ್ರಿಸಿದ್ದ ಕಾರಣದಿಂದ ಶಾಂಘೈ ಸಹಕಾರ ಒಕ್ಕೂಟದ ಎನ್ ಎಸ್ಎ ಗಳ ಸಭೆಯಿಂದ ಎನ್ಎಸ್ಎ ಅಜಿತ್ ದೋವಲ್ ಹೊರನಡೆದಿದ್ದರು.
ಈಗ ರಷ್ಯಾ ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತಿದ್ದು, ಈ ಬಾರಿ ದ್ವಿಪಕ್ಷೀಯ ವಿಷಯಗಳನ್ನು ಪ್ರಸ್ತಾಪಿಸುವುದಕ್ಕೆ ಎಸ್ ಸಿಒ ಸಭೆಯಲ್ಲಿ ಅವಕಾಶವಿಲ್ಲ, ಈ ಅಂಶವನ್ನು ಎಲ್ಲಾ ಸದಸ್ಯ ರಾಷ್ಟ್ರಗಳ ಗಮನಕ್ಕೆ ತರಲಾಗಿದೆ. ಎಸ್ ಸಿಒ ಇರುವುದು ಸದಸ್ಯ ರಾಷ್ಟ್ರಗಳ ನಡುವಿನ ಬಹುಪಕ್ಷೀಯ ಸಹಕಾರಕ್ಕಾಗಿ ಎಂದು ರಷ್ಯಾ ತಿಳಿಸಿದೆ.