ಹೊಸ ದಿಗಂತ ವರದಿ, ವಿಜಯಪುರ:
ಕರ್ನಾಟಕ ಬಂದ್ಗೆ ಡಿ.5 ರಂದು ಕರೆ ನೀಡಿರುವ ನಕಲಿ ಹೋರಾಟಗಾರರಿಗೆ, ರೋಲ್ ಕಾಲ್ ಹೋರಾಟಗಾರರಿಗೆ ಮುಖ್ಯಮಂತ್ರಿಗಳು ಭಯಪಡಬೇಕಿಲ್ಲ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮರಾಠಾ ಭಾಷೆ, ಬೆಳಗಾವಿ ವಿಚಾರದಲ್ಲಿ ಶಿವಸೇನೆಯನ್ನು ವಿರೋಧಿಸುತ್ತೇನೆ. ಶರದ್ ಪವಾರ, ಅಜಿತ್ ಪವಾರ ಅವರನ್ನು ವಿರೋಧಿಸುತ್ತೇನೆ ಎಂದರು.
ನವು ಮೊದಲು ಹಿಂದೂಗಳು, ನಮ್ಮ ರಕ್ಷಣೆ ಮಾಡಿದ ಶಿವಾಜಿ ಮಹಾರಾಜರ ಸಮುದಾಯಕ್ಕೆ ಇನ್ನೂ ಹೆಚ್ಚಿನ ಸೌಲಭ್ಯ ಒದಗಿಸಬೇಕು. ಇದರಿಂದ ಗನ್ನಡಿಗರ ಮತ ಹೋಗುತ್ತೇ ಅಂತ ಸಿಎಂ ಚಿಂತೆ ಮಾಡಬಾರದರು ಎಂದರು.
ವಿಜಯಪುರದಲ್ಲಿ ಅದ್ಹೇಗೆ ಬಂದ್ ಮಾಡುತ್ತಾರೋ ನೋಡೋಣಾ. ಸುಮ್ಮನೆ ಕನ್ನಡದ ಹೆಸರಿನಲ್ಲಿ ಹೋರಾಟ ಸಲ್ಲದು. ಕನ್ನಡ ಮತ್ತು ಸಂಸ್ಕೃತಿ ಹೆಸರಿನಲ್ಲಿ ವಾಟಾಳ ನಾಗರಾಜ ಹಾಗೂ ಕನ್ನಡ ಪರ ಸಂಘಟನೆಗಳ ಮುಖಂಡರು ಎಷ್ಟು ಅನುದಾನ ಪಡೆದಿದ್ದಾರೆ ? ಅವರು ಸರ್ಕಾರದಿಂದ ಪಡೆದ ಹಣವನ್ನು ಯಾವುದಾದರೂ ಬೇರೆ ಕನ್ನಡಪರ ಸಂಘಟನೆಗಳಿಗೆ ನೀಡಿದ್ದಾರಾ ? ಇವರೆಲ್ಲ ಬೆಂಗಳೂರಿನ ಹೊಟೇಲ್ನಲ್ಲಿ ಕುಳಿತು ಹೇಳುತ್ತಾರೆ. ವಾಟಾಳ ನಾಗರಾಜರಿಂದ ನಾವೇನು ಕಲಿಯಬೇಕಿಲ್ಲ. ಮರಾಠಾ ಸಮುದಾಯಕ್ಕೆ ನೀಡಿರುವ ನಿಮಗಕ್ಕೆ ಬೆಂಬಲವಿದೆ. ಸಿಎಂ ಏನಾದರೂ ಅಭಿವೃದ್ಧಿ ನಿಗಮ ಹಿಂಪಡೆದರೆ ದೊಡ್ಡ ಅನಾಹುತವಾಗುತ್ತೆ ಎಂದು ಎಚ್ಚರಿಸಿದರು.
ರಾಜ್ಯ ಸರ್ಕಾರ ಮರಾಠಿ ಅಭಿವೃದ್ಧಿ ನಿಗಮ ಮಾಡಿಲ್ಲ. ಮರಾಠಾ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪಿಸಿದೆ. ದೇಶದಲ್ಲಿ ಹಿಂದೂ ಧರ್ಮ ಉಳಿಯಲು ಹಾಗೂ ಇಂದು ನಾವೆಲ್ಲ ಹಿಂದೂಗಳಾಗಿ ಉಳಿಯಲು ಛತ್ರಪತಿ ಶಿವಾಜಿ ಮಹಾರಾಜರು ಕಾರಣ. ಶಿವಾಜಿ ಮಹಾರಾಜರು ಹುಟ್ಟಿರದಿದ್ದರೆ ಭಾರತ ಯಾವತ್ತೊ ಪಾಕಿಸ್ತಾನದ ಭಾಗವಾಗುತ್ತಿತ್ತು. ಹಾಗಂತ ಕವಿಯೊಬ್ಬರು ಎಂದೋ ಹೇಳಿದ್ದಾರೆ. ಶಿವಾಜಿ ಮಹಾರಾಜರು ಕನ್ನಡಿಗರೇ, ಆದಿಲ್ ಶಾಹಿ ಕಾಲದಲ್ಲಿ ಶಿವಾಜಿ ಮಹಾರಾಜರ ತಂದೆ ಶಹಾಜಿ ರಾಜೆ ಬೆಂಗಳೂರಿನ ಸರದಾರರಾಗಿದ್ದರು. ಅಂದು ಬೆಂಗಳೂರು ಆದಿಲ್ ಶಾಹಿ ಆಳ್ವಿಕೆಯಲ್ಲಿತ್ತು. ಮರಾಠಾ ಸುಮದಾಯ ಯಾವಾಗಲೂ ಹಿಂದೂ ಪರವಾಗಿದೆ. ಧರ್ಮದ, ದೇಶದ ಪರವಾಗಿ ಹೋರಾಟ ಮಾಡಿದ ಸಮುದಾಯ. ಆ ಸಮುದಾಯಕ್ಕೆ ಸರ್ಕಾರ ಕಾನೂನಾತ್ಮಕವಾಗಿ ಆ ಪ್ರಾಧಿಕಾರಕ್ಕೆ ಏನೆಲ್ಲ ಕೊಡಲು ಸಾಧ್ಯವೋ ಅದನ್ನೆಲ್ಲ ಕೊಡಬೇಕು. ಮರಾಠಾ ಸಮುದಾಯದ ಕೊಡುಗೆ ದೊಡ್ಡದಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮರಾಠಾ ಸಮುದಾಯವಿದೆ. ಆ ನಿಗಮಕ್ಕೆ ಇನ್ನೂ ಹೆಚ್ಚಿನ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.