ಬೀದರ: ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಮೊದಲನೇ ಸುತ್ತಿನ ಕಾಲುಬಾಯಿ ಜ್ವರ ರೋಗ ಲಸಿಕಾ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಜಿಲ್ಲಾಧಿಕಾರಿಗಳಾದ ಆರ್. ರಾಮಚಂದ್ರನ್ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 08ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಯಿತು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಅಕ್ಟೋಬರ್ 2ರಿಂದ ಮೊದಲನೇ ಸುತ್ತಿನ ಕಾಲುಬಾಯಿ ಜ್ವರ ರೋಗದ ಲಸಿಕಾ ಕಾರ್ಯಕ್ರಮ ಪ್ರಾರಂಭವಾಗಬೇಕಿತ್ತು. ಆದರೆ, ಜಿಲ್ಲೆಯಲ್ಲಿ ಜಾನುವಾರುಗಳಿಗೆ ಚರ್ಮ ಗಂಟು ರೋಗ ಇರುವ ಪ್ರಯುಕ್ತ ಅಕ್ಟೋಬರ್ 20 ರಿಂದ ಕಾಲುಬಾಯಿ ಜ್ವರ ರೋಗದ ಲಸಿಕಾ ಕಾರ್ಯಕ್ರಮ ಪ್ರಾರಂಭಿಸಲಾಗತ್ತಿದೆ ಎಂದು ತಿಳಿಸಿದರು.
ಬೀದರ ಜಿಲ್ಲೆಯ ರೈತರು ತಪ್ಪದೇ ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಿ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಾರ್ವಜನಿಕರಿಗೆ ತಿಳಿಸಿದರು.
ಜಿಲ್ಲಾ ಪಂಚಾಯತ್ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗ್ಯಾನೇಂದ್ರಕುಮಾರ ಗಂಗವಾರ ಅವರು ಮಾತನಾಡಿ, ಪಶು ಸಂಗೋಪನೆಯು ರೈತರ ಆರ್ಥಿಕ ಸ್ಥಿತಿ ಸುಧಾರಿಸಲು ಇರುವ ಉತ್ತಮವಾದ ಕಸುಬಾಗಿದೆ. ಈ ನಿಟ್ಟಿನಲ್ಲಿ ಪ್ರತಿ ತಾಲ್ಲೂಕಿನಿಂದ 3 ರಿಂದ 4 ರೈತರನ್ನು ಆಯ್ಕೆ ಮಾಡಿ ಪಶು ಸಂಗೋಪನಾ ಉದ್ಯಮದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿ ಅವರ ಆರ್ಥಿಕ ಸ್ಥಿತಿ ಉತ್ತಮಗೊಳಿಸಲು ಹಾಗೂ ಅವರ ಯಶೋಗಾಥೆಗಳನ್ನು ಮಾಧ್ಯಮದಲ್ಲಿ ಪ್ರಚುರಪಡಿಸಿ ಇತರ ರೈತರಿಗೆ ಮಾದರಿಯಾಗುವಂತೆ ಗುರಿ ನಿಗದಿಪಡಿಸಿಕೊಳ್ಳಲು ಸೂಚಿಸಿದರು.
ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಾದ ಡಾ.ಮಲ್ಲಿಕಾರ್ಜುನ ಹಂಚನಾಳ ಅವರು ಮಾತನಾಡಿ, ಪ್ರಸಕ್ತ ಸುತ್ತಿನಲ್ಲಿ ಜಿಲ್ಲೆಯಲ್ಲಿ 2,99,144 ಜಾನುವಾರುಗಳಿಗೆ ಕಾಲು ಬಾಯಿ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಈಗಾಗಲೆ ಜಿಲ್ಲೆಗೆ ಲಸಿಕೆ ಹಾಗೂ ಸಿರಿಂಜ್ ಮತ್ತು ಅವಶ್ಯಕ ಸಲಕರಣೆಗಳ ಸರಬರಾಜಾಗಿದ್ದು, ಅಕ್ಟೋಬರ್ 20 ರಿಂದ ಜಿಲ್ಲೆಯಾದ್ಯಂತ ಇಲಾಖೆಯ ಸಿಬ್ಬಂದಿಯು ಉಚಿತವಾಗಿ ರೈತರ ಜಾನುವಾರುಗಳಿಗೆ ಲಸಿಕೆ ಹಾಕಲಿದ್ದಾರೆ. ಕೊರೋನಾ ಇರುವ ಹಿನ್ನೆಲೆಯಲ್ಲಿ ಲಸಿಕಾ ಸಿಬ್ಬಂದಿಯವರ ಸುರಕ್ಷತೆಗಾಗಿ ಮಾಸ್ಕ್, ಸ್ಯಾನಿಟೈಜರ್ಸ್ ಹಾಗೂ ಫೇಸ್ ಶೀಲ್ಡ್ಗಳನ್ನು ಸರಬಾರಾಜು ಮಾಡಿರುವುದಾಗಿ ಸಭೆಗೆ ತಿಳಿಸಿದರು. ಲಸಿಕೆಯೊಂದಿಗೆ ಜಾನುವಾರುಗಳಿಗೆ ಕಿವಿ ಓಲೆ ಅಳವಡಿಸುವ ಕಾರ್ಯ ಕೂಡ ಚಾಲ್ತಿಯಲ್ಲಿದ್ದು, ರೈತರು ತಮ್ಮ ಜಾನುವಾರುಗಳಿಗೆ ತಪ್ಪದೇ ಕಿವಿ ಓಲೆ ಹಾಗೂ ಲಸಿಕೆ ಹಾಕಿಸಿಕೊಳ್ಳುವಂತೆ ವಿನಂತಿಸಿದರು.
ಸಭೆಯಲ್ಲಿ ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಮನ್ವಯ ಅಧಿಕಾರಿಗಳಾದ ಡಾ.ರವೀಂದ್ರಕುಮಾರ ಭೂರೆ, ಉಪ ನಿರ್ದೇಶಕರು, ಪಾಲಿಕ್ಲಿನಿಕ್ ಬೀದರ, ಡಾ.ಗೌತಮ ಅರಳಿ ಮುಖ್ಯ ಪಶು ವೈದ್ಯಾಧಿಕಾರಿಗಳು, ಜಿಲ್ಲೆಯ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾ ನಿರ್ವಹಣಾ ಸಮಿತಿಯ ಸದಸ್ಯರು ಹಾಜರಿದ್ದರು.