ಕಾಸರಗೋಡು: ಕೊರೋನಾ ಅವಧಿಯಲ್ಲಿ ಪರೀಕ್ಷೆ ನಡೆಸಲು ಸಿದ್ಧವಾಗಿ ಕೇರಳ ಸಾರ್ವಜನಿಕ ಶಿಕ್ಷಣ ಇಲಾಖೆ ಸಜ್ಜುಗೊಂಡಿದೆ. ಅದರಂತೆ ನಾಳೆಯಿಂದ (ಮೇ 26 ರಿಂದ ) SSLC, ಹೈಯರ್ ಸೆಕೆಂಡರಿ ಪರೀಕ್ಷೆಗಳು ಆರಂಭಗೊಳ್ಳಲಿದ್ದು , ಕಾಸರಗೋಡು ಜಿಲ್ಲೆಯಲ್ಲಿ ಈ ಸಂಬಂಧ ಸಿದ್ಧತೆಗಳು ಪೂರ್ಣಗೊಂಡಿವೆ.
ಜಿಲ್ಲೆಯಲ್ಲಿ ಈ ಬಾರಿ 53344 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಜಿಲ್ಲೆಯ 153 ಸೆಂಟರ್ ಗಳಲ್ಲಿ 19630 ಮಂದಿ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಹಾಜರಾಗುವರು. 106 ಕೇಂದ್ರಗಳಲ್ಲಿ 16677 ಪ್ಲಸ್ ವನ್, 17037 ಪ್ಲಸ್ ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅಲ್ಲದೆ 22 ಕೇಂದ್ರಗಳಲ್ಲಿ 3 ಸಾವಿರ ವಿದ್ಯಾರ್ಥಿಗಳು ವಿ.ಎಚ್.ಎಸ್.ಸಿ. ಪರೀಕ್ಷೆಗೆ ಹಾಜರಾಗುವರು.
ಇದೇ ವೇಳೆ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಹಾಜರಾಗಬೇಕಿರುವ 297 ಮಂದಿ ವಿದ್ಯಾರ್ಥಿಗಳು ಲಾಕ್ ಡೌನ್ ಕಾರಣದಿಂದ ಕರ್ನಾಟಕದ ವಿವಿಧೆಡೆ ಬಾಕಿಯಾಗಿದ್ದಾರೆ. ಇವರಲ್ಲಿ 33 ಮಂದಿ ಸ್ವಯಂ ಪರೀಕ್ಷೆಗೆ ಹಾಜರಾಗುವುದಾಗಿ ಈಗಾಗಲೇ ತಿಳಿಸಿದ್ದಾರೆ. ಉಳಿದಂತೆ 264 ಮಂದಿ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಹಾಜರಾಗಬೇಕಾದ ವಿದ್ಯಾರ್ಥಿಗಳು, 204 ಮಂದಿ ಹೈಯರ್ ಸೆಕೆಂಡರಿ ಪರೀಕ್ಷೆಗೆ ಹಾಜರಾಗಬೇಕಾದ ವಿದ್ಯಾರ್ಥಿಗಳು ಕರ್ನಾಟಕದಲ್ಲಿದ್ದಾರೆ.
ಕಾಸರಗೋಡು ಜಿಲ್ಲೆಯ ಯಾವ ಪ್ರದೇಶಗಳಲ್ಲೂ ಪರೀಕ್ಷೆಯ ಕೇದ್ರಗಳಲ್ಲಿ ಬದಲಾವಣೆಯಿಲ್ಲ. ಹಾಟ್ ಸ್ಪಾಟ್ ಗಳಾಗಿರುವ ಗ್ರಾಮ ಪಂಚಾಯತ್ ಗಳ, ನಗರಸಭೆಗಳ ಪರೀಕ್ಷೆ ಕೇಂದ್ರಗಳಲ್ಲೇ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬಹುದು. ಆದರೆ ಕಂಟೈನ್ ಮೆಂಟ್ ಝೋನ್ ಗಳಿಂದ ಬರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಗಳಲ್ಲಿ ಪರೀಕ್ಷೆ ಬರೆಯಲು ಸೌಲಭ್ಯ ಏರ್ಪಡಿಸಲಾಗುವುದು. ಇದಕ್ಕಿರುವ ಸಿದ್ಧತೆಗಳು ಭರದಿಂದ ನಡೆಯುತ್ತಿವೆ.
ಪರೀಕ್ಷಾ ಕೇಂದ್ರಗಳಿರುವ ಶಾಲೆಗಳಿಗೆ ಪ್ರಯಾಣ ನಡೆಸುವ ಸಂಬಂಧ ಮಂಜೂರಾತಿಗಾಗಿ ಕೋವಿಡ್ 19 ಜಾಗ್ರತಾ ಪೋರ್ಟಲ್ ನಲ್ಲಿ ನೋಂದಣಿ ನಡೆಸಿರುವ ವಿದ್ಯಾರ್ಥಿಗಳು ಉಪಜಿಲ್ಲಾಧಿಕಾರಿ ಮಂಜೂರು ಮಾಡಿರುವ ಪಾಸ್ ಸಹಿತ ಇಂದು (ಮೇ 25) ಬೆಳಗ್ಗೆ 10 ಗಂಟೆಗೆ ಮುಂಚಿತವಾಗಿ ತಲಪ್ಪಾಡಿ ಗಡಿ ಚೆಕ್ ಪೋಸ್ಟ್ ನಲ್ಲಿ ಹಾಜರಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಇವರನ್ನು ಜಿಲ್ಲಾಡಳಿತವು ಏರ್ಪಡಿಸಿರುವ ಪ್ರತ್ಯೇಕ ಕೆ.ಎಸ್.ಆರ್.ಟಿ.ಸಿ. ಬಸ್ ಗಳಲ್ಲಿ ಆಯಾ ಕೇಂದ್ರಗಳಿಗೆ ತಲುಪಿಸಲಾಗುವುದು. ಒಂದು ಬಸ್ ನಲ್ಲಿ ತಲಾ 30 ಮಂದಿ ವಿದ್ಯಾರ್ಥಿಗಳು ಎಂಬ ಕ್ರಮದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಗಳು ಸಂಚಾರ ನಡೆಸಲಿವೆ. ಪರೀಕ್ಷೆ ಮುಗಿಯುವ ವರೆಗೆ ಈ ವಿದ್ಯಾರ್ಥಿಗಳ ವಸತಿ, ಭೋಜನ ಇತ್ಯಾದಿ ಪೂರ್ಣ ಹೊಣೆ ಆಯಾ ಶಾಲೆಗಳದೇ ಆಗಿರುತ್ತದೆ. ಜೊತೆಗೆ ಈ ಮಕ್ಕಳು ಗ್ರಾಮ ಪಂಚಾಯತ್ ಕಾರ್ಯದರ್ಶಿ ಮತ್ತು ಆರೋಗ್ಯ ಕೇಂದ್ರದಲ್ಲೂ ಹಾಜರಾಗಬೇಕು.
ಶಾಲೆಗಳಿಗೆ ತಲುಪುವ ವಿದ್ಯಾರ್ಥಿಗಳು ಕೋವಿಡ್ 19 ಜಾಗ್ರತಾ ಕಟ್ಟುನಿಟ್ಟುಗಳ ಪ್ರಕಾರ ಪರೀಕ್ಷೆ ಬರೆಯಲು, ಸ್ಯಾನಿಟೈಸರ್ ಬಳಸಲು, ಸಾಮಾಜಿಕ ಅಂತರ ಪಾಲಿಸಲು ಆದೇಶವನ್ನು ಆಯಾ ಕೇಂದ್ರಗಳಿಗೆ ತಲುಪಿಸಲಾಗಿದೆ ಎಂದು ಜಿಲ್ಲಾ ಶಿಕ್ಷಣ ಉಪನಿರ್ದೇಶಕಿ ಕೆ.ವಿ.ಪುಷ್ಪಾ ತಿಳಿಸಿದರು. ಪರೀಕ್ಷೆ ಮುಗಿದ ನಂತರವೂ ಆರೋಗ್ಯ ಇಲಾಖೆಯ ಆದೇಶ ಪ್ರಕಾರ 14 ದಿನಗಳ ಕ್ವಾರೆಂಟೈನ್ ಪೂರ್ಣಗೊಳಿಸಬೇಕಿದೆ. ಈ ಪರೀಕ್ಷೆಗಳಿಗಾಗಿ ಜಿಲ್ಲೆಯ ಶಾಲೆಗಳು ಸಿದ್ಧಗೊಂಡಿವೆ. ಈ ಬಾರಿಯ ಸಿದ್ಧತೆಗಳು ಪ್ರತಿ ಪ್ರದೇಶದ ಜನತೆಯ ಒಗ್ಗಟ್ಟಿನ ಯಶಸ್ಸಿನ ಫಲವಾಗಿದೆ. ಸ್ಥಳೀಯಾಡಳಿತ ಸಂಸ್ಥೆಗಳು, ಶಾಲೆಯ ಸಿಬ್ಬಂದಿಗಳು, ಶಿಕ್ಷಕರು, ಸ್ವಯಂ ಸೇವಾ ಸಂಘಟನೆಗಳು, ಜನಪ್ರತಿನಿಧಿಗಳು, ಹಳೆ ವಿದ್ಯಾರ್ಥಿಗಳು ಮೊದಲಾದವರು ಸಿದ್ಧತೆಗೆ ಹೆಗಲು ನೀಡಿದ್ದಾರೆ.
ಶುಚೀಕರಣ, ಪರೀಕ್ಷಾ ಕೊಠಡಿಯ ಪೀಠೋಪಕರಣಗಳ ಸಜ್ಜು ಸಹಿತ ವಿವಿಧ ಕಾಯಕಗಳು ಅವರ ಸಹಕಾರದೊಂದಿಗೆ ನಡೆದಿವೆ. ಕರ್ನಾಟಕದಿಂದ ಪಾಸ್ ಸಹಿತ ಆಗಮಿಸುವ ಮಕ್ಕಳಿಗೆ ಬೇಕಾದ ಸೌಲಭ್ಯಗಳನ್ನೂ ಶಾಲೆಗಳಲ್ಲಿ ಒದಗಿಸಲಾಗುವುದು.
ಸಿದ್ಧತೆಗಳ ಅಂಗವಾಗಿ ಆಯಾ ಪರೀಕ್ಷಾ ಕೇಂದ್ರಗಳಿರುವ ಶಾಲೆಗಳನ್ನು ರೋಗಾಣು ಮುಕ್ತವಾಗಿಸುವ ಕಾರ್ಯ ನಡೆದಿದೆ. ಜಿಲ್ಲೆಯ ಎಲ್ಲ ಶಾಲೆಗಳನ್ನೂ ಈ ನಿಟ್ಟಿನಲ್ಲಿ ಶುಚಿಗೊಳಿಸಲಾಗಿದೆ. ಅಗ್ನಿಶಾಮಕ ದಳ ಮತ್ತು ಸಿವಿಲ್ ಡಿಫೆನ್ಸ್ ಫೋರ್ಸ್ ಜಂಟಿಯಾಗಿ ಈ ಕಾಯಕ ನಡೆಸಿವೆ. ಈ ಮೂಲಕ ಕೊರೋನಾ ಪ್ರತಿರೋಧ ಚಟುವಟಿಕೆಗಳ ಸಹಿತದ ಪರೀಕ್ಷಾ ಅವಧಿಯ ಸಿದ್ಧತೆಗಳು ಪೂರ್ಣಗೊಂಡಿವೆ. ಮೊದಲ ಹಂತದಲ್ಲಿ ಕೋವಿಡ್ ಪ್ರತಿರೋಧ ಚಟುವಟಿಕೆಗಳು, ಶಿಬಿರಗಳು ಇತ್ಯಾದಿ ನಡೆದ ಶಾಲೆಗಳಲ್ಲಿ ಸೋಡಿಯಂ ಹೈಪೋ ಕ್ಲಾರೈಡ್ ಮಿಶ್ರಣ ಬಳಸಿ ಪೂರ್ಣ ಪ್ರಮಾಣದ ರೋಗಾಣುಮುಕ್ತ ಕಾಯಕ ನಡೆಸಲಾಗಿದೆ. ನಂತರ ಜಿಲ್ಲೆಯ ಇತರ ಶಾಲೆಗಳಲ್ಲೂ ಈ ಚಟುವಟಿಕೆಗಳು ನಡೆದಿವೆ.