ಮಂಗಳೂರು: ಬಹುಮಾನ ಲಭಿಸಿಲ್ಲ ಎಂದು ಹರಿದು ಬಿಸಾಕಿದ್ದ ಲಾಟರಿ ಟಿಕೆಟಿನಲ್ಲಿ ಬರೋಬ್ಬರಿ ಐದು ಲಕ್ಷ ರೂ. ಬಹುಮಾನವಿದ್ದ ವಿಲಕ್ಷಣ ಘಟನೆಯೊಂದು ಕಾಸರಗೋಡಿನ ಚೆಂಗಳದಲ್ಲಿ ನಡೆದಿದೆ.
ನಡೆದಿದ್ದೇನು?
ಆಟೋ ರಿಕ್ಷಾ ಚಾಲಕ ಚೂರಿಪಳ್ಳದ ಮನ್ಸೂರ್ ಅಲಿ ಎಂಬವರು ಕೇರಳ ಲಾಟರಿ ಟಿಕೆಟ್ ಖರೀದಿಸಿದ್ದು, ಅ.19 ರಂದು ನೆಲ್ಲಿಕಟ್ಟೆಯ ಆಟೋ ಸ್ಟ್ಯಾಂಡ್ ನಲ್ಲಿ ಏಜಂಟ್ ಬಳಿ ಇದ್ದ ಪಟ್ಟಿಯಲ್ಲಿನ ಲಾಟರಿ ಫಲಿತಾಂಶ ನೋಡಿದ್ದರು. ಕೊನೆಯ ಸಾಲಿನ ನಂಬ್ರಗಳನ್ನು ನೋಡಿದ ಮನ್ಸೂರ್, ಬಹುಮಾನ ಲಭಿಸಿಲ್ಲ ಎಂದು ಕೈಯಲ್ಲಿದ್ದ ಮೂರು ಲಾಟರಿ ಟಿಕೆಟ್ ಗಳನ್ನು ಹರಿದು ಬಿಸಾಡಿದ್ದರು. ಇದಾಗಿ ಕೆಲವೇ ಗಂಟೆಗಳಲ್ಲಿ ಏಜಂಟ್, ಆಟೋ ಸ್ಟ್ಯಾಂಡ್ ಗೆ ಬಂದು ಅಲ್ಲಿರುವ ಸಂಖ್ಯೆಗೆ ಐದು ಲಕ್ಷ ರೂ. ಬಹುಮಾನ ಬಂದಿರುವುದಾಗಿ ತಿಳಿಸಿದ್ದರು.
ಆದರೇ ಅಷ್ಟರಲ್ಲಾಗಲೇ ಲಾಟರಿ ಟಿಕೆಟ್ ಹರಿದು ಎಸೆಲಾಗಿತ್ತು. ಎಸೆದಿದ್ದ ಟಿಕೇಟನ್ನು ಮನ್ಸೂರ್ ಹಾಗೂ ಇತರ ಚಾಲಕರು ಸೇರಿ ಒಟ್ಟುಗೂಡಿಸಿ ಜಿಲ್ಲಾ ಲಾಟರಿ ಕಚೇರಿಗೆ ವಿಷಯ ತಿಳಿಸಿದಾಗ ಅವರು ಶಾಸಕರ ಪತ್ರ ಸಹಿತ ರಾಜ್ಯ ಲಾಟರಿ ನಿರ್ದೇಶಕರಿಗೆ ಮನವಿ ಸಲ್ಲಿಸಲು ತಿಳಿಸಿದ್ದಾರೆ.
ಸಿಕ್ಕೀತಾ ಬಹುಮಾನ?
ಟಿಕೆಟ್ ನ್ನು ಚೂರು ಚೂರು ಮಾಡಿರುವುದರಿಂದ ಬಹುಮಾನ ಸಿಗುವುದು ಅನುಮಾನ ಎನ್ನಲಾಗುತ್ತಿದೆ. ಆದರೆ ಹರಿದ ಟಿಕೇಟನ್ನು ಜೋಡಿಸಿ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಸಮರ್ಪಕವಾಗಿ ಕಂಡು ಬಂದಲ್ಲಿ ಬಹುಮಾನ ಲಭಿಸುವ ಸಾಧ್ಯತೆ ಇದೆ. ಏನಿದ್ದರೂ ಅಂತಿಮ ತೀರ್ಮಾನ ರಾಜ್ಯ ಲಾಟರಿ ನಿರ್ದೇಶಕರದ್ದಾಗಿದೆ. ಹೀಗಾಗಿ ಮುಂದಿನ ಬೆಳವಣಿಗೆ ಕಾಡು ನೋಡಬೇಕಿದೆ.