ತಿರುವನಂತಪುರ: ಕೋವಿಡ್ ನಿಯಂತ್ರಣಗಳ ಭಾಗವಾಗಿ ಸ್ಥಗಿತಗೊಂಡಿದ್ದ ಕೆ ಎಸ್ ಆರ್ ಟಿ ಸಿ ಯ ದೂರದ ಪ್ರಯಾಣ ಸೇವೆಗಳನ್ನು ಪುನರಾರಂಭಿಸುವ ನಿರ್ಧಾರದಿಂದ ಕೇರಳ ಸರಕಾರವು ಹಿಂದೆ ಸರಿದಿದೆ. ರಾಜ್ಯ ಸಾರಿಗೆ ಇಲಾಖೆ ಸಚಿವ ಎ.ಕೆ.ಶಶೀಂದ್ರನ್ ಹಾಗೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಡುವಿನ ಮಾತುಕತೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ಇಲಾಖೆಯು ನೀಡಿರುವ ಎಚ್ಚರಿಕೆಗಳನ್ನು ಪರಿಶೀಲಿಸಿದ ಬಳಿಕ ದೀರ್ಘದೂರದ ಸೇವೆಗಳನ್ನು ಸದ್ಯಕ್ಕೆ ಆರಂಭಿಸುವುದು ಬೇಡ ಎಂದು ನಿರ್ಧರಿಸಲಾಯಿತು. ಕೋವಿಡ್ ಬಾಧಿತರ ಸಂಖ್ಯೆ ಮತ್ತು ಸಾವುಗಳು ಪ್ರತಿದಿನವೂ ಹೆಚ್ಚೆಚ್ಚು ವರದಿಯಾಗುತ್ತಿರುವುದರಿಂದ ಈ ತೀರ್ಮಾನಕ್ಕೆ ಬರಲಾಗಿದೆ. ರಾಜ್ಯದ ಅನೇಕ ಜಿಲ್ಲಾ ಕೇಂದ್ರಗಳು ಕಂಟೈನ್ ಮೆಂಟ್ ವಲಯದಲ್ಲಿವೆ. ಅಲ್ಲದೆ ಹಾಟ್ ಸ್ಪಾಟ್ಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ. ಹಲವಾರು ಕೆಎಸ್ ಆರ್ ಟಿಸಿ ಬಸ್ ನೌಕರರಿಗೆ ಈಗಾಗಲೇ ಕೊರೋನಾ ದೃಢಪಡಿಸಲಾಗಿದ್ದು , ಆರೋಗ್ಯ ಇಲಾಖೆಯು ನೀಡಿದ ಎಚ್ಚರಿಕೆಯ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ದೂರದ ಬಸ್ ಸೇವೆಗಳನ್ನು ಪ್ರಾರಂಭಿಸುವುದರಿಂದ ಅಪಾರ ಸಮಸ್ಯೆಗಳು ಎದುರಾಗಲಿವೆ
ಎಂದು ಆರೋಗ್ಯ ಇಲಾಖೆಯು ಎಚ್ಚರಿಸಿದೆ. ಇದೇ ವೇಳೆ ರೋಗಿಗಳ ಸಂಖ್ಯೆ ಹೆಚ್ಚಾದರೆ ಜಿಲ್ಲೆಗಳೊಳಗಿನ ಬಸ್ ಸೇವೆಗಳನ್ನೂ ನಿಲ್ಲಿಸಬೇಕಾಗುತ್ತದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ. ಮನೆಯಲ್ಲಿಯೇ ಇರಬೇಕಾದ ಪರಿಸ್ಥಿತಿಯನ್ನು ಜನಸಾಮಾನ್ಯರು ಅರ್ಥ ಮಾಡಿಕೊಳ್ಳಬೇಕು. ಸಂಪರ್ಕ ರೋಗಿಗಳ ಸಂಖ್ಯೆ ಮತ್ತು ಹಾಟ್ ಸ್ಪಾಟ್ಗಳ ಸಂಖ್ಯೆಯ ಹೆಚ್ಚಳ ಬಸ್ ಸೇವೆಯನ್ನು ಪ್ರಾರಂಭಿಸಲು ಸವಾಲಾಗಿದೆ ಎಂದು ಸಾರಿಗೆ ಇಲಾಖೆ ಅಭಿಪ್ರಾಯಪಟ್ಟಿದೆ.