ಉಡುಪಿ: ರುಕ್ಮಿಣೀ ಕರಾರ್ಚಿತ ಉಡುಪಿಯ ಶ್ರೀಕೃಷ್ಣ ಕಳೆದ 9 ದಿನಗಳಿಂದ ದೇವಿಯ ಅಲಂಕಾರದಲ್ಲಿ ಕಂಗೊಳಿಸಿದ್ದಾನೆ. ಇದೇನು ಹೊಸದಲ್ಲ, ವರ್ಷವಿಡೀ ಕಡೆಗೋಲ ಕೃಷ್ಣ ಶುಕ್ರವಾರಗಳಂದು ದೇವಿಯ ರೂಪದಲ್ಲಿ ಕಾಣಿಸುತ್ತಾನೆ, ಆದರೆ ಈ ಬಾರಿ ಕೈಮಗ್ಗದ ’ಉಡುಪಿ ಸೀರೆ’ಯುಟ್ಟು ಮಿಂಚಿದ್ದಾನೆ.
ಉಡುಪಿಯ ಶ್ರೀಕೃಷ್ಣ ಉತ್ಸವಪ್ರಿಯ, ಅದೇ ರೀತಿ ಬಾಲಗೋಪಾಲ ಅಲಂಕಾರ ಪ್ರಿಯನೂ ಹೌದು. ನಿತ್ಯ ಒಂದೊಂದು ರೂಪದಲ್ಲಿ ಕಾಣಿಸಿಕೊಳ್ಳುವ ದೇವರನ್ನು ನವರಾತ್ರಿ ಸಂದರ್ಭ ಪರ್ಯಾಯ ಶ್ರೀಗಳು, 9ದಿನ ನಾನಾ ರೀತಿಯಲ್ಲಿ ದೇವಿಯ ಅಲಂಕಾರ ಮಾಡುವ ಸಂಕಲ್ಪ ಮಾಡಿದ್ದಾರೆ.
ಈ ಬಾರಿ ಕೃಷ್ಣ ಪೂಜಾ ಕೈಂಕರ್ಯ ಮಾಡುತ್ತಿರುವವರು ಪರ್ಯಾಯ ಅದಮಾರು ಶ್ರೀಈಶಪ್ರಿಯತೀರ್ಥ ಸ್ವಾಮೀಜಿ ನವರಾತ್ರಿ ಸಂದರ್ಭದಲ್ಲಿ ಉಡುಪಿ ಸೀರೆಯನ್ನು ಉಡಿಸಿ ಅಲಂಕಾರ ಪೂಜೆ ಮಾಡುವ ಸಂಕಲ್ಪ ಮಾಡಿದ್ದಾರೆ. ಅದರಂತೆ ನವರಾತ್ರಿ ಸಂದರ್ಭಗಳಲ್ಲಿ ದೇವಿ ಅಲಂಕಾರಕ್ಕೆ ಉಡುಪಿ ಸೀರೆಯನ್ನು ಬಳಸಲಾಗಿದೆ. ಉಡುಪಿ ಸೀರೆಯಲ್ಲಿ ಕೃಷ್ಣ ರಾರಾಜಿಸುವ ಮೂಲಕ ಭಕ್ತರಿಗೆ ದರ್ಶನ ನೀಡಿದ್ದಾನೆ.
ನವರಾತ್ರಿ ಆರಂಭದ ದಿನ ಮೋಹಿನಿ ಅಲಂಕಾರ ನಂತರ ಕ್ರಮವಾಗಿ ಸತ್ಯಭಾಮ, ಪದ್ಮಾವತಿ, ಅಂತಃಪುರದಲ್ಲಿ ರುಕ್ಮಿಣಿ ಮತ್ತು ಸರಸ್ವತಿ ಅಲಂಕಾರವನ್ನು ಸೋದೆ ಶ್ರೀವಿಶ್ವವಲ್ಲಭತೀರ್ಥರು ಮಾಡಿದ್ದರು. ನಂತರ ನಾಲ್ಕು ದಿನಗಳ ಕಾಲ ಪದ್ಮಾವತಿ, ರಾಜರಾಜೇಶ್ವರಿ, ಮಹಿಷಮರ್ದಿನಿ ಹಾಗೂ ಕೊನೆಯ ದಿನ ಗಜಲಕ್ಷ್ಮೀ ಅಲಂಕಾರವನ್ನು ಕಾಣಿಯೂರು ಮಠಾಧೀಶ ಶ್ರೀವಿದ್ಯಾವಲ್ಲಭತೀರ್ಥ ಸ್ವಾಮೀಜಿ ಮಾಡಿ, ಪೂಜಿಸಿದ್ದರು.
ಪರ್ಯಾಯ ಶ್ರೀಈಶಪ್ರಿಯತೀರ್ಥರ ಮುತುವರ್ಜಿಯಿಂದಾಗಿ ಉಡುಪಿ ಕೃಷ್ಣಮಠದಲ್ಲೀಗ ಗಣ್ಯರಿಗೆ ಪ್ರಸಾದ ರೂಪದಲ್ಲಿ ನೀಡಲು ಉಡುಪಿ ಸೀರೆ ಅಥವಾ ಕೈಮಗ್ಗದಿಂದ ನೇಯ್ದ ಶಾಲುಗಳನ್ನು ಬಳಸಲಾಗುತ್ತಿದೆ. ಕೃಷ್ಣನ ಅಲಂಕಾರಕ್ಕೂ ಆಗಾಗ್ಗೆ ಉಡುಪಿ ಸೀರೆಯನ್ನು ಉಪಯೋಗಿಸಲಾಗುತ್ತಿದೆ. ಕಿನ್ನಿಗೋಳಿಯ ತಾಳಿಪಾಡಿ ಕೈಮಗ್ಗ ನೇಕಾರರ ಸಂಘವು ಉಡುಪಿ ಕೃಷ್ಣಮಠಕ್ಕೆ ಸೀರೆ, ಶಾಲುಗಳನ್ನು ಒದಗಿಸುವ ಕಾರ್ಯ ನಡೆಸುತ್ತಿದೆ