ಹೊಸ ದಿಗಂತ ವರದಿ ಕೊಡಗು:
ಕೊಡಗಿನ ಐನ್ಮನೆಗಳು ಕೊಡವ ಸಂಸ್ಕೃತಿಯ ಒಂದು ಕೇಂದ್ರ ಬಿಂದುವಾಗಿದ್ದು, ಅದನ್ನು ಸಂರಕ್ಷಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಪ್ರತಿ ಕುಟುಂಬದಲ್ಲೂ ಟ್ರಸ್ಟ್ನ್ನು ರಚಿಸಿ ಐನ್ಮನೆಯನ್ನು ಸಂರಕ್ಷಿಸಬೇಕು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಬಾಚರಣಿಯಂಡ ಪಿ ಅಪ್ಪಣ್ಣ ಅಭಿಪ್ರಾಯಪಟ್ಟರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಸಹಯೋಗದಲ್ಲಿ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಸಭಾಂಗಣದಲ್ಲಿ ‘ಐನ್ಮನೆಯ ಬಗ್ಗೆ ವಿಚಾರಸಂಕಿರಣ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಕೊಡವ ಸಂಸ್ಕೃತಿಯ ಕಣ್ಮರೆಯಾಗುತ್ತಿದ್ದು, ಕೊಡವ ಸಂಸ್ಕೃತಿಯ ಮತ್ತು ಭಾಷೆಯನ್ನು ಉಳಿಸಲು ನಾವೆಲ್ಲ ಮುಂದಾಗಬೇಕೆಂದು ಸಲಹೆ ನೀಡಿದ ಅವರು, ಐನ್ಮನೆಯು ಪೂರ್ವಜರಿಂದ ನಿರ್ಮಾಣವಾಗಿದ್ದು ಇದಕ್ಕೆ ಬಳಸಿದ ಮರಗಳನ್ನು ಕಾರ್ಬನ್ 14 ಪರೀಕ್ಷೆಗೆ ಒಳಪಡಿಸಿದರೆ ಐನ್ಮನೆಗೆ ಐತಿಹಾಸಿಕ ಇತಿಹಾಸವಿರುವುದು ತಿಳಿಯುತ್ತದೆ. ಕುಟುಂಬದ ಸಂಸ್ಕೃತಿಯ ಇದೀಗ ಮರೆಯಾಗಿರುವುದರಿಂದ ಮೂಲವನ್ನು ಕೊಡವರು ಮರೆಯುತ್ತಿದ್ದಾರೆ. ಕೊಡಗಿನಿಂದ ವಲಸೆ ಹೋಗುತ್ತಿರುವುದು ತಪ್ಪಲ್ಲ. ಆದರೆ ಐನ್ಮನೆ ಸಂಸ್ಕೃತಿಯ ಮರೆಯುತ್ತಿರುವುದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದರು.
‘ಐನ್ಮನೆಸ್ ದ ಕಾಂಟೆಕ್ಸ್ಟ್ ಅಂಡ್ ಕಂಟಿನ್ಯೂಯಿಟಿ’ ಎಂಬ ವಿಷಯದ ಕುರಿತಾಗಿ ದಿಕ್ಸೂಚಿ ಭಾಷಣ ಮಾಡಿದ ‘ದಿ ವ್ಯಾನಿಶಿಂಗ್ ಕೊಡವಾಸ್’ ಪುಸ್ತಕದ ಲೇಖಕಿ ಕಂಬೀರಂಡ ಕಾವೇರಿ ಪೊನ್ನಪ್ಪ ಅವರು, ಐನ್ಮನೆಯು ಕೊಡವ ಸಂಸ್ಕೃತಿಯ ಅಸ್ಮಿತೆಯಾಗಿದೆ. ಐನ್ಮನೆಯನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಿದ್ದು, ಜಾಗತೀಕರಣ ಇತ್ತೀಚೆಗೆ ಸಂಸ್ಕೃತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಐನ್ಮನೆಗಳ ವಿನ್ಯಾಸ, ಮಹತ್ವ, ಪಾತ್ರಗಳು ಗಮನಿಸಿದರೆ ಅದರ ಐತಿಹಾಸಿಕ ಸ್ಥಾನಮಾನಗಳು ಅರಿವಿಗೆ ಬರುತ್ತದೆ. ಆರ್ಥಿಕ, ರಾಜಕೀಯ, ಸಂಸ್ಕೃತಿಯ ಕೇಂದ್ರ ಬಿಂದು ಐನ್ಮನೆಗಳಾಗಿವೆ. ಅಲ್ಲಿರುವ ಕೈಮಡ, ಬೋಟಿ, ಕನ್ನಿಕಂಬ, ಭಂಡಾರಪೊಟ್ಟಿ, ನೆಲ್ಲಕ್ಕಿ ನಡುಬಾಡೆ, ಕೈಯಾಲೆ, ವರ್ಷಂಪ್ರತಿ ನಡೆಯುವ ಗುರು ಕಾರೋಣ, ತೆರೆ, ಕಾವೇರಿ ಚಂಗ್ರಾಂದಿ, ಪುತ್ತರಿ, ಕೈಲ್ಪೋಲ್ದ್ ಕೊಡವ ಸಂಸ್ಕೃತಿಯ ಧಾರ್ಮಿಕ ಸಂಕೇತವಾಗಿದೆ. ಐನ್ಮನೆ ಕುಟುಂಬವನ್ನು ಒಂದುಗೂಡಿಸುವ ಕೆಲಸ ಮಾಡುತ್ತಿದೆ. ಕುಟುಂಬದ ತಕ್ಕ ಮುಖ್ಯಸ್ಥರು ಸಮರ್ಥವಾಗಿ ಕುಟುಂಬವನ್ನು ಮುನ್ನಡೆಸುತ್ತಾರೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಚೌರೀರ ಜಗತ್ ತಿಮ್ಮಯ್ಯ ಅವರು, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಆಯೋಜಿಸಿರುವ ಈ ಕಾರ್ಯಕ್ರಮ ಒಂದು ಒಳ್ಳೆಯ ಕಾರ್ಯಕ್ರಮವಾಗಿದೆ. ಯುವ ಜನರಲ್ಲಿ ಕೊಡವ ಸಂಸ್ಕೃತಿ, ಪರಂಪರೆಯ ಮಹತ್ವದ ಬಗ್ಗೆ ಅರಿವು ಮೂಡಿಸಲು ಅಕಾಡೆಮಿಯು ಉತ್ತಮ ಕಾರ್ಯನಿರ್ವಹಿಸುತ್ತಿದೆ. ಪ್ರತಿ ಕುಟುಂಬದ ಹಿರಿಯರು ತಮ್ಮ ಮಕ್ಕಳಿಗೆ ಇದರ ಬಗ್ಗೆ ಮನವರಿಕೆ ಮಾಡಿದರೆ ಕೊಡವ ಸಂಸ್ಕೃತಿಯನ್ನು ಉಳಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆವಹಿಸಿದ್ದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ಮಾತನಾಡಿ, ಐನ್ಮನೆಯು ಕೇವಲ ಒಂದು ಮನೆಯಲ್ಲ. ಅದು ಕೊಡವ ಸಂಸ್ಕೃತಿಯ ಮೂಲವಾಗಿದೆ. ಸಾಹಿತ್ಯ ಬೆಳೆಯಬೇಕಾದರೆ ಕೊಡವ ಸಂಸ್ಕೃತಿ ಆಚಾರ-ವಿಚಾರ ಪದ್ಧತಿಗಳ ಸಂಶೋಧನೆಯಾಗಬೇಕು ಹಾಗೂ ಇವುಗಳ ಬಗ್ಗೆ ವಿಚಾರಸಂಕಿರಣ ಕಾರ್ಯಕ್ರಮಗಳನ್ನು ಅಕಾಡೆಮಿ ನಡೆಸುತ್ತಿರುವುದರಿಂದ ಯುವ ಜನಾಂಗಕ್ಕೆ ಇದರ ಅರಿವು ಮೂಡುತ್ತದೆ. ನಾವು ಎಲ್ಲೇ ಇದ್ದರೂ ನಮ್ಮ ಸಂಸ್ಕೃತಿ ಆಚಾರ ವಿಚಾರವನ್ನು ಮರೆಯಬಾರದು. ಐನ್ಮನೆ ಬಗ್ಗೆ ಅರಿವು ಇದ್ದರೆ ಮಾತ್ರ ಅದರ ಮಹತ್ವ ತಿಳಿಯುತ್ತದೆ ಎಂದರು.
‘ಕೊಡಗಿನ ಐನ್ಮನೆ ಅಂದು ಇಂದು’ ಎಂಬ ವಿಷಯದ ಬಗ್ಗೆ ಹಿರಿಯ ಸಂಶೋಧಕಿ ಐನ್ಮನೇಸ್ ಆಫ್ ಕೊಡಗು ಪುಸ್ತಕದ ಲೇಖಕಿ ಡಾ. ಬೊವ್ವೇರಿಯಂಡ ನಂಜಮ್ಮ ಚಿಣ್ಣಪ್ಪ, ‘ಐನ್ಮನೆ ಪುಶ್ಚೇತನ’ದ ಕುರಿತು ನಡಿಕೇರಿಯಂಡ ಧ್ಯಾನ್ ಚಿಣ್ಣಪ್ಪ, ‘ಕೊಡಗ್ರ ಕೈಮಡ’ ದ ಕುರಿತು ಮಾದೇಟಿರ ಬೆಳ್ಯಪ್ಪ ಹಾಗೂ ‘ಐನ್ಮನೆರ ನಿರ್ವಹಣೆಲ್ ಯುವ ಜನಾಂಗತ್ರ ಜವಾಬ್ದಾರಿ’ ವಿಷಯದ ಕುರಿತಾಗಿ ಚೋಕಂಡ ಸೂರಜ್ ಸೋಮಯ್ಯ ಅವರುಗಳು ವಿಚಾರ ಮಂಡಿಸಿದರು. ಮುಖ್ಯ ಅತಿಥಿಗಳಾಗಿ ಪ್ರೊ. ವೀಣಾ ಪೂಣಚ್ಚ, ಬಡಕಡಮ್ಮಂಡ ಕಸ್ತೂರಿ ಗೋವಿಂದಮ್ಮಯ್ಯ, ನಾಗೇಶ್ ಕಾಲೂರು ಪುತ್ತಾಮನೆ ಅನಿತಾ ಜೀವನ್ ಭಾಗವಹಿಸಿದ್ದರು.
ಐನ್ಮನೆಗೆ ಸಂಬಂಧಿಸಿದ ವಿಚಾರ ಮಂಡನೆ ಕಾರ್ಯಕ್ರಮದಲ್ಲಿ ಚಿಲ್ಲಾಜಮ್ಮನ ನಾ. ಸೋಮೇಶ್, ಅಣ್ಣಾಳಪಂಡ ಧರ್ಮಶೀಲ ಅಜಿತ್ ಅತಿಥಿಗಳಾಗಿ ಭಾಗವಹಿಸಿದ್ದರು.