ಗದಗ : ರಾಜ್ಯದಲ್ಲಿ ಕೋವಿಡ್-೧೯ ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ವಿಫಲವಾಗಿದೆ ಅಲ್ಲದೇ, ವೈದ್ಯಕೀಯ ಉಪಕರಣಗಳು, ಪಿಪಿಇ ಕಿಟ್ಗಳ ಖರೀದಿಯಲ್ಲಿ ರಾಜ್ಯ ಸರಕಾರ ಸಾಕಷ್ಟು ಭ್ರಷ್ಟಾಚಾರವೆಸಗಿದ್ದು ಈ ಬಗ್ಗೆ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ಸಮಗ್ರ ತನಿಖೆ ನಡೆಸಬೇಕು ಎಂದು ವಿಧಾನ ಪರಿಷತ್ ವಿರೋಧ ನಾಯಕ ಎಸ್.ಆರ್.ಪಾಟೀಲ ಹೇಳಿದರು.
ನಗರದ ಕಾಟನ್ ಸೇಲ್ಸೋಸಾಯಿಟಿಯಲ್ಲಿ ಭಾನುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕೊವಿಡ್ ಹಾಗೂ ನೋಟ್ಬ್ಯಾನ್ ವಿಚಾರದಲ್ಲಿ ಸರಕಾರ ಕೈಗೊಂಡ ತಪ್ಪು ನಿರ್ಧಾರದಿಂದಾಗಿ ದೇಶದ ಆರ್ಥಿಕತೆ ಋಣಾತ್ಮಕವಾಗಿದೆ. ನೋಟ್ಬ್ಯಾನ್ನಿಂದ ದೇಶದ ಜಿಡಿಪಿ ಶೂನ್ಯಕ್ಕಿಳಿದರೆ, ಇದೀಗ ಕೋವಿಡ್ನಿಂದಾಗಿ ಮೈನಸ್ಗೆ ಜಾರಿದೆ. ಈ ನಡುವೆ ಮೋದಿ ಸರಕಾರ ಸುಗ್ರೀವಾಜ್ಞೆ ಮೂಲಕ ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆಗಳನ್ನು ತಿದ್ದುಪಡಿಗೊಳಿಸಿ, ದೇಶದ ಜನ ಸಾಮಾನ್ಯರನ್ನು ಬೀದಿಗೆ ತಳ್ಳುವ ಪ್ರಯತ್ನ ನಡೆಸಿದೆ ಎಂದು ಹೇಳಿದರು.
ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯಕ್ ಮಾತನಾಡಿ, ಕರ್ನಾಟಕದ ಸರಕಾರವನ್ನು ಉರುಳಿಸಿದ ಮಾದರಿಯಲ್ಲೇ ಮಧ್ಯ ಪ್ರದೇಶದಲ್ಲಿ ಬಿಜೆಪಿಯು ಉದ್ದೇಶ ಪೂರ್ವಕವಾಗಿಯೇ ಲಾಕ್ಡೌನ್ ವಿಳಂಬ ಮಾಡಿದೆ. ಪ್ರಧಾನಿ ಮೋದಿ ಸರಕಾರ ಮಾತ್ರ ಮಾರ್ಚ್ರೆಗೂ ಕೊರೋನಾವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಅದರ ಫಲವಾಗಿ ಇಂದು ದೇಶದ ಹಳ್ಳಿ ಹಳ್ಳಿಗೂ ಕೊರೋನಾ ಹಬ್ಬಲು ಕಾರಣವಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರುಗಳಾದ ಡಿ.ಆರ್.ಪಾಟೀಲ್, ಬಿ.ಆರ್.ಯಾವಗಲ್, ರಾಮಕೃಷ್ಣ ದೊಡ್ಡಮನಿ, ಶ್ರೀನಿವಾಸ ಮಾನೆ, ಜಿಪಂ ಅಧ್ಯಕ್ಷ ರಾಜೂಗೌಡ್ರ ಕೆಂಚನಗೌಡ್ರ, ಉಪಾಧ್ಯಕ್ಷೆ ಶೋಭಾ ಮೇಟಿ, ಅಶೋಕ ಮಂದಾಲಿ, ಉಮರ್ಪಾರೂಖ ಹುಬ್ಬಳ್ಳಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು