ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟರೆ ಅವರ ಅಂತ್ಯಸಂಸ್ಕಾರ ನೆರವೇರಿಸಲು ರಾಜ್ಯ ಸರ್ಕಾರ ನಗರದ ಹೊರವಲಯದಲ್ಲಿ ನಿವೇಶನ ಮಂಜೂರು ಮಾಡಿದೆ. ನಗರದ ಹೊರವಲಯದಲ್ಲಿ 10 ಕಡೆ ಅಂತ್ಯಸಂಸ್ಕಾರಕ್ಕೆ ಜಾಗ ನಿಗದಿ ಮಾಡಿದೆ. ಒಟ್ಟು 35 ಎಕರೆ 18 ಗುಂಟೆ ಜಾಗ ಕಾಯ್ದಿರಿಸಿದೆ.
ಕೆಲ ಪ್ರದೇಶವನ್ನು ಬಿಬಿಎಂಪಿಗೆ ಹಸ್ತಾಂತರ ಮಾಡಿದೆ. ಕೊರೋನಾದಿಂದ ಮೃತರಾದವರ ಅಂತ್ಯಕ್ರಿಯೆಗೆ ಸರ್ಕಾರ ಈ ಜಾಗವನ್ನು ಬೆಂಗಳೂರು ನಗರದೊಳಗೆ, ಜನ ವಸತಿ ಪ್ರದೇಶದಲ್ಲಿರುವ ಸ್ಮಶಾನದೊಳಗೆ ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸುವುದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಅಂತ್ಯಸಂಸ್ಕಾರ ನಡೆಸಲು ಕೆಲವು ಕಡೆ ಸಾರ್ವಜನಿಕರು ಗಲಾಟೆ ನಡೆಸಿದ್ದರು. ಹೀಗಾಗಿ ಸಾರ್ವಜನಿಕರಿಗೆ ಸ್ಪಂದಿಸಿರುವ ಸಚಿವ ಶ್ರೀರಾಮುಲು ನಗರದ ಹೊರವಲಯದಲ್ಲಿ 2 ಎಕರೆ ಜಾಗ ಮೀಸಲಿಡುವುದಾಗಿ ಹೇಳಿದ್ದರು. ನಗರದ ಒಳಗೆ ಇರುವ ಸ್ಮಶಾನಗಳಲ್ಲಿ ಅಂತ್ಯಕ್ರಿಯೆ ಮಾಡುವಂತಿಲ್ಲ ಎಂದು ಆದೇಶಿಸಿದ್ದರು.
ದಾಸನಪುರ ಗಿಡ್ಡೇನಹಳ್ಳಿ ಸರ್ವೆ ನಂಬರ್ 80 ರಲ್ಲಿ 4 ಎಕರೆ, ಉತ್ತರಹಳ್ಳಿ ಗುಳಿಕಮಲೆ ಸರ್ವೆ ನಂಬರ್ 35 ರಲ್ಲಿ 4 ಎಕರೆ, ತಾವರೆಕೆರೆ ತಿಪ್ಪಗೊಂಡನಹಳ್ಳಿ ಸರ್ವೆ ನಂ. 4 ರಲ್ಲಿ 5 ಎಕರೆ, ಹೆಸರುಘಟ್ಟದ ಹುತ್ತನಹಳ್ಳಿಯಲ್ಲೂ 2 ಎಕರೆ ಜಾಗ ನಿಗದಿ, ಮಾರೇನಹಳ್ಳಿ ಸರ್ವೆ ನಂಬರ್ 182 ರಲ್ಲಿ 5 ಎಕರೆ ಜಾಗ, ಒಟ್ಟು 35ಎಕರೆ 18 ಗುಂಟೆ ಜಾಗ ಸ್ಮಶಾನಕ್ಕೆ ನಿಗದಿ ಮಾಡಲಾಗಿದೆ. ಸೋಂಕಿತರ ಅಂತ್ಯಸಂಸ್ಕಾರಕ್ಕೆ ಈ ಪ್ರದೇಶ ಬಳಕೆ ಮಾಡಿಕೊಳ್ಳಲಾಗುತ್ತದೆ.