ಬಳ್ಳಾರಿ: ಮಹಾ ಹೆಮ್ಮಾರಿ ಕೊರೋನಾ ನಿಯಂತ್ರಣಕ್ಕೆ ಫ್ರಂಟ್ ಲೈನ್ ನಲ್ಲಿ ಹಗಲಿರುಳು ಶ್ರಮಿಸುತ್ತಿರುವವರನ್ನು ಪ್ರತಿಯೊಬ್ಬರು ಗೌರವಿಸಬೇಕು ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಹೇಳಿದರು.
ನಗರದ ಸಮರ್ಥನಂ ವಿಕಲಚೇತನ ಸಂಸ್ಥೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಾತ್ರೆಗಳ ಕಿಟ್ ವಿತರಣೆ ಸಮಾರಂಭಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು. ಹಗಲು, ರಾತ್ರಿ, ಮಳೆ, ಛಳಿ ಎನ್ನದೇ ನೋವೆಲ್ ಕೊರೋನಾ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿಗಳು, ವೈದ್ಯರು, ಆಶಾ ಕಾರ್ಯಕರ್ತರು ಸೇರಿದಂತೆ ಅನೇಕ ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಿದ್ದು, ಪ್ರತಿಯೊಬ್ಬರೂ ಅವರನ್ನು ಗೌರವಿಸಬೇಕು ಎಂದರು.
ಕೊರೋನಾ ವೈರಸ್ ನಿಯಂತ್ರಣಕ್ಕೆ ಸರ್ಕಾರ ಅನೇಕ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಆದರೂ ನಿಯಂತ್ರಣಕ್ಕೆ ಬಾರದಾಗಿದೆ. ಪ್ರತಿಯೊಬ್ಬರೂ ಸಾಮಾಜಿಕ ಅಂತರ ಪಾಲಿಸಬೇಕು, ಮಾಸ್ಕ್ ನ್ನು ತಪ್ಪದೇ ಧರಿಸಬೇಕು. ಆಗಾಗ್ಗೆ ಕೈತೊಳೆಯುವುದನ್ನು ಮರೆಯಕೂಡದು. ಇದರೊಂದಿಗೆ ನಾವೆಲ್ಲರೂ ಹೋರಾಟ ಮಾಡಬೇಕಿದೆ. ಸದ್ಯ ಇರುವ ನಾನಾ ಖಾಯಿಲೆಗಳ ಇದೊಂದು ಎಂದು ಭಾವಿಸಿ ಇದರೋಟ್ಟಿಗೆ ಹೋರಾಡಬೇಕು, ಯಾವುದೇ ಕಾರಣಕ್ಕೂ ಆತಂಕಕ್ಕೆ ಯಾರೂ ಒಳಗಾಗಬಾರದು, ನಿಮ್ಮೊಂದಿಗೆ ನಾವಿದ್ದೇವೆ ಎಂದು ನಾಗರಿಕರಿಗೆ ಧೈರ್ಯ ತುಂಬಿದರು. ಇದಕ್ಕೂ ಮುನ್ನ ಆರೋಗ್ಯ ಸಹಾಯಕಿಯರಿಗೆ, ಪೌರ ಕಾರ್ಮಿಕರಿಗೆ, ಪೊಲೀಸ್ ಸಿಬ್ಬಂದಿಗಳಿಗೆ ಮಾಸ್ಕ್, ಸ್ಯಾನಿಟ್ಯಜರ್, ವಿವಿಧ ಮಾತ್ರೆಗಳನ್ನು ವಿತರಿಸಿದರು. ಸಮರ್ಥನಂ ಸಂಸ್ಥೆಯ ಪದಾಧಿಕಾರಿಗಳ ಕಾರ್ಯ ಮೆಚ್ಚುವಂತಹದ್ದು ಎಂದು ಶ್ಲಾಘಿಸಿದರು. ಈ ಸಂದರ್ಭದಲ್ಲಿ ನಗರ ಶಾಸಕ ಗಾಲಿ ಸೋಮಶೆಖರ ರೆಡ್ಡಿ ಮಾತನಾಡಿದರು. ಸಂಸ್ಥೆಯ ಮುಖ್ಯಸ್ಥರು, ವಿವಿಧ ಮುಖಂಡರು, ಇತರರು ಉಪಸ್ಥಿತರಿದ್ದರು.