ಕೋಲಾರ: ಜಿಲ್ಲೆಯಲ್ಲಿ ಮತ್ತೇ ಮೂರು ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವ ಮೂಲಕ ಈವರೆವಿಗೂ ಪತ್ತೆಯಾದ ಪ್ರಕರಣಗಳ ಸಂಖ್ಯೆ ೨೩ ಕ್ಕೇರಿದೆ. ಈಗಾಗಲೇ ಐವರು ಪಾಸಿಟಿವ್ ವ್ಯಕ್ತಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯೊಂದಿದ್ದು, ಜಿಲ್ಲೆಯ ಸಕ್ರಿಯ ಪ್ರಕರಣಗಳ ಸಂಖ್ಯೆ ೧೮ ಆಗಿದೆ.
ಕೋಲಾರದ ಗೌರಿಪೇಟೆಯಲ್ಲಿ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬರು ಪತ್ತೆಯಾಗಿದ್ದು, ಈತ ಅತಿಯಾದ ತಂಬಾಕು ಸೇವನೆಯಿಂದಾಗಿ ಚಿಕಿತ್ಸೆಗೆ ಒಳಗಾಗಿದ್ದನೆನ್ನಲಾಗಿದೆ. ಈ ವ್ಯಕ್ತಿ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದು, ಅಲ್ಲಿ ಶಸ್ತ್ರಚಿಕಿತ್ಸೆಗೂ ಮುನ್ನಾ ಕೊರೋನಾ ಪರೀಕ್ಷೆ ಕಡ್ಡಾಯವೆಂದು ವೈದ್ಯರು ಸೂಚಿಸಿದ ಹಿನ್ನಲೆಯಲ್ಲಿ ಈತ ಪರೀಕ್ಷೆಗೆ ಒಳಗಾಗಿದ್ದು, ಕೊರೋನಾ ಪತ್ತೆಯಾಗಿದೆ.
ಈ ಮಾಹಿತಿ ಸಿಕ್ಕ ಕೂಡಲೇ ನಗರಸಭೆ ಆಯುಕ್ತ ಶ್ರೀಕಾಂತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಜಯಕುಮರ್ ಮತ್ತಿತರರು ಭೇಟಿ ನೀಡಿದ್ದರು.
ನಗರದ ಗೌರಿಪೇಟೆ,ಕುರುಬರಪೇಟೆ ವ್ಯಾಪ್ತಿಯ ಆತನ ನಿವಾಸದ ಸುತ್ತ ೨೦೦ ಮೀಟರ್ ವ್ಯಾಪ್ತಿಯನ್ನು ಕಂಟೈನ್ಮೆಂಟ್ ಝೋನ್ ಆಗಿ ಪರಿವರ್ತಿಸಲಾಗಿದ್ದು, ಬ್ಯಾರಿಕೇಡ್ ಹಾಕಿ ವಾಹನ,ಜನಸಂಚಾರ ತಡೆಯಲಾಗಿದೆ.
ಸೋಂಕಿತ ವ್ಯಕ್ತಿಯನ್ನು ಕೋವಿಡ್ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಈತನೊಂದಿಗೆ ೫೦ಕ್ಕೂ ಹೆಚ್ಚು ಮಂದಿ ಪ್ರಾಥಮಿಕ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.
ಸೋಂಕಿತನ ಕುಟುಂಬ ಸದಸ್ಯರು, ಕುರುಬರಪೇಟೆಯ ಇಬ್ಬರು ಸ್ನೇಹಿತರು, ಈತನನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ದಿದ್ದ ಕಾರು ಚಾಲಕನನ್ನು ಕ್ವಾರೆಂಟೈನ್ ಗೆ ಕಳುಹಿಸಲಾಗಿದೆ.