ಹೊಸ ದಿಗಂತ ವರದಿ, ಚಿಕ್ಕಮಗಳೂರು:
ಶ್ರೀರಾಮಸೇನೆ ಸಂಘಟನೆ ವತಿಯಿಂದ ನವೆಂಬರ್ 26 ರಂದು ನಡೆಯಲಿರುವ ದತ್ತಮಾಲೆ ಕಾರ್ಯಕ್ರಮವನ್ನು ಕೋವಿಡ್-19 ಹಿನ್ನಲೆಯಲ್ಲಿ ಸರಳವಾಗಿ ಆಚರಿಸುವಂತೆ ಜಿಲ್ಲಾಧಿಕಾರಿ ಡಾ.ಎಸ್.ಬಗಾದಿ ಗೌತಮ್ ಸಂಘಟನೆ ಕಾರ್ಯಕರ್ತರಿಗೆ ತಿಳಿಸಿದರು.
ಅವರು ಬುಧವಾರ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ದತ್ತಮಾಲಾ ಅಭಿಯಾನದ ಹಿನ್ನೆಲೆಯಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೊರೋನಾ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ವಯ ಈ ಬಾರಿ ಕನಿಷ್ಠ 100 ಜನ ಸೇರಲು ಅವಕಾಶವಿದ್ದು, ದತ್ತಮಾಲೆಯಲ್ಲಿ ಭಾಗವಹಿಸುವ ಎಲ್ಲರೂ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸುವಂತೆ ತಿಳಿಸಿದರು.
ದತ್ತಮಾಲಾ ಅಭಿಯಾನ ಅಂಗವಾಗಿ ಪ್ರತಿ ವರ್ಷ ನಡೆಯುವ ಮೆರವಣಿಗೆ, ಶೋಭಾಯಾತ್ರೆಗೆ ಈ ಬಾರಿ ಅವಕಾಶ ಇರುವುದಿಲ್ಲ. ಬೆಟ್ಟಕ್ಕೆ ದೊಡ್ಡ ಚಾರ್ಸಿಯ ಬಸ್ಗಳಲ್ಲಿ ತೆರಳಲು ಅವಕಾಶವಿರುವುದಿಲ್ಲ. ಲಘು ವಾಹನಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ತೆರಳುವಂತೆ ಹೇಳಿದರು.
ಶ್ರೀರಾಮ ಸೇನೆಯ ಜಿಲ್ಲಾ ಅಧ್ಯಕ್ಷ ರಂಜಿತ್ ಶೆಟ್ಟಿ ಸಭೆಗೆ ಮಾಹಿತಿ ನೀಡಿ ಕೊರೋನಾ ಹಿನ್ನಲೆಯಲ್ಲಿ ಬೇರೆ ಬೇರೆ ಜಿಲ್ಲೆಗಳಿಂದ ಪದಾಧಿಕಾರಿಗಳು ಬರದಂತೆ ಸೂಚನೆ ನೀಡಲಾಗಿದ್ದು, ಆಯಾ ಜಿಲ್ಲೆಗಳಲ್ಲಿ ಅಂದು ದತ್ತಮಾಲೆ ಧರಿಸಿ ಆಯಾ ಜಿಲ್ಲೆಗಳಲ್ಲಿಯೇ ವಿಸರ್ಜಿಸುವಂತೆ ತಿಳಿಸಲಾಗಿದೆ. ಸರ್ಕಾರದ ಮಾರ್ಗಸೂಚಿ ಹಾಗೂ ಜಿಲ್ಲಾಡಳಿತದ ನಿರ್ಣಯದಂತೆ ಈ ಬಾರಿ ಶೋಭಾಯಾತ್ರೆ ಮಾಡಲಾಗುವುದಿಲ್ಲ, ಜಿಲ್ಲೆಯ 100 ಜನ ಕಾರ್ಯಕರ್ತರು ಗುರು ದತ್ತಾತ್ರೇಯ ಪೀಠಕ್ಕೆ ತೆರಳಿ ಸರಳವಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಹೆಚ್.ಅಕ್ಷಯ್ ಮಾತನಾಡಿ, ಯಾವ ವಾಹನಗಳಲ್ಲಿ ಬೆಟ್ಟಕ್ಕೆ ತೆರಳುತ್ತೀರಿ ಎನ್ನುವ ಬಗ್ಗೆ ಮಾಹಿತಿ ನೀಡಿ ಅನುಮತಿ ಪಡೆಯಬೇಕು, ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಬ್ಯಾನರ್, ಫ್ಲೆಕ್ಸ್ ಹಾಕಲು ಅವಕಾಶವಿರುವುದಿಲ್ಲ. ನಗರಸಭೆ ಆಯುಕ್ತರು ಸೂಚಿಸಿದ 5 ಕಡೆ ಬ್ಯಾನರ್ ಕಟ್ಟಲು ಅವಕಾಶ ನೀಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದ ದಿನವಾದ ನವೆಂಬರ್ 26 ರಂದು ಗುರು ದತ್ತಾತ್ರೇಯ ಪೀಠ ಬಾಬಾ ಬುಡನ್ ಗಿರಿಗೆ ಪ್ರವಾಸಿಗರು ಬರುವುದನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದ್ದು, ಪ್ರವಾಸಿಗರು ಅಂದು ಬಾಬಾ ಬುಡನ್ಗಿರಿಗೆ ಆಗಮಿಸದಂತೆ ಮನವಿ ಮಾಡುತ್ತೇವೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹಾಗೂ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ಶ್ರೀರಾಮ ಸೇನೆ ಕಾರ್ಯಕರ್ತರಿಗೆ ತಿಳಿಸಿದರು.
ಬೆಟ್ಟದಲ್ಲಿ ನವೆಂಬರ್ 26 ರಂದು ತಾತ್ಕಾಲಿಕ ಆಸ್ಪತ್ರೆ ತೆರೆದು ಅಗತ್ಯ ಔಷಧಿ ಹಾಗೂ ಅಂಬುಲೇನ್ಸ್ಗಳೊಂದಿಗೆ ವೈದ್ಯಾಧಿಕಾರಿಗಳನ್ನು ನಿಯೋಜಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ತಾತ್ಕಾಲಿಕ ಆಸ್ಪತ್ರೆಯ ಆವರಣಕ್ಕೆ ಸುಣ್ಣ-ಬಣ್ಣ ಬಳಿಯುವುದು ಅವಶ್ಯವಿರುವ ಕಡೆ ಬ್ಯಾರಿಕೇಡ್ಗಳನ್ನು ಹಾಕುವುದಲ್ಲದೆ ಸಿ.ಸಿ.ಟಿವಿ ದುರಸ್ಥಿಯಲ್ಲಿದ್ದರೆ ದುರಸ್ಥಿಗೊಳಿಸಿ ಅವಶ್ಯವಿರುವ ಕಾಮಗಾರಿ ನಿರ್ವಹಣೆ ಮಾಡುವಂತೆ ನಿರ್ಮಿತಿ ಕೇಂದ್ರಕ್ಕೆ ಸೂಚಿಸಿದರು.
ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಮೆಸ್ಕಾಂ ಕಾರ್ಯಪಾಲಕ ಅಭಿಯಂತರರಿಗೆ ಹಾಗೂ ಗಾಳಿಕೆರೆ ಹಾಗೂ ಮಾಣಿಕ್ಯಧಾರಕ್ಕೆ ತೆರಳುವ ರಸ್ತೆ ದುರಸ್ಥಿಪಡಿಸುವಂತೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ, ಕುಡಿಯುವ ನೀರಿನ ವ್ಯವಸ್ಥೆ ಯನ್ನು ನಗರಸಭೆಯವರು ಮಾಡಬೇಕು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಡಾ.ಕುಮಾರ್, ಉಪವಿಭಾಗಾಧಿಕಾರಿ ರೇಣುಕಾ ಪ್ರಸಾದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಉಮೇಶ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.