ಉಡುಪಿ: ಬ್ರಹ್ಮಾವರದ ಸಮೀಪದ ನೀಲಾವರ ಗೋಶಾಲೆಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀರಾಮ ಜನ್ಮಭೂಮಿ
ತೀರ್ಥ ಕ್ಷೇತ್ರ ಟ್ರಸ್ಟ್ನ ಟ್ರಸ್ಟಿ ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರನ್ನು ರಾಜ್ಯ ಹಿಂದು ಧಾರ್ಮಿಕ ದತ್ತಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಭಾನುವಾರ ಭೇಟಿಯಾಗಿ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಕುಶಲೋಪರಿ ನಡೆಸಿದಾಗ ಪೇಜಾವರ ಶ್ರೀಗಳು, ಕೊರೋನಾ ಸೋಂಕಿನ ಸಂದರ್ಭದಲ್ಲಿ ರಾಜ್ಯದಾದ್ಯಂತ ಇರುವ ಗೋಶಾಲೆಗಳು ಸಂಕಷ್ಟಕ್ಕೆ ಒಳಗಾಗಿವೆ. ಆದ್ದರಿಂದ ಗೋವುಗಳ ಸಂರಕ್ಷಣೆಗೆ ರಾಜ್ಯ ಸರಕಾರ ಧಾವಿಸಬೇಕು, ಈ ಕುರಿತು ಗಮನಹರಿಸಬೇಕೆಂದು ಸಚಿವರಿಗೆ ಸಲಹೆ ನೀಡಿದರು.
ಅಲ್ಲದೇ ಆ. 5ರಂದು ಅಯೋಧ್ಯೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭವ್ಯ ರಾಮಮಂದಿರದ ಭೂಮಿ ಪೂಜೆ ನಡೆಸುವ ಹಿನ್ನೆಲೆಯಲ್ಲಿ, ಅಂದು ರಾಜ್ಯದಾದ್ಯಂತ ಇರುವ ದೇವಸ್ಥಾನಗಳಲ್ಲಿ ಲೋಕಕಲ್ಯಾಣಾರ್ಥವಾಗಿ ವಿಶೇಷ ಪೂಜೆ ನಡೆಸಲು ಅಗತ್ಯ ಕ್ರಮಕೈಗೊಳ್ಳುವುದು ಸೂಕ್ತ ಎಂಬ ಸಲಹೆ ಕೊಟ್ಟರು. ಇದೇ ವೇಳೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಕರ್ನಾಟಕದ ಕೋಟ್ಯಾಂತರ ಭಕ್ತರ ಕಡೆಯಿಂದ ಕಾಣಿಕೆ ಸಲ್ಲಿಸಲು ಸಹ ಯೋಚನೆ ಮಾಡುವುದು ಉತ್ತಮ ಎಂದು ಪೇಜಾವರ ಶ್ರೀಗಳು ತಿಳಿಸಿದರು.
ಮುಂದಿನ ದಿನಗಳಲ್ಲಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮಮಂದಿರದ ವೀಕ್ಷಣೆಗೆ ಹಾಗೂ ಶ್ರೀರಾಮನ ದರ್ಶನಕ್ಕೆ ರಾಜ್ಯದಿಂದ ಕೋಟ್ಯಾಂತರ ಭಕ್ತರು ತೆರಳುವುದರಿಂದ, ಅವರ ವಾಸ್ತವ್ಯಕ್ಕಾಗಿ ಯಾತ್ರಿ ನಿವಾಸದ ಮಾದರಿಯಲ್ಲಿ ಕರ್ನಾಟಕ ಭವನ ನಿರ್ಮಾಣ ಮಾಡುವ ಸಲುವಾಗಿ, ಸ್ಥಳ ಕಾಯ್ದಿರಿಸಲು ಉತ್ತರಪ್ರದೇಶದ ಸರಕಾರಕ್ಕೆ ಈಗಲೇ ಪ್ರಸ್ತಾವನೆಯನ್ನು ಸಲ್ಲಿಸುವುದು ಮತ್ತು ಕರ್ನಾಟಕ ಸರಕಾರದ ಮೂಲಕ ಯಾತ್ರಿ ನಿವಾಸ ನಿರ್ಮಾಣ ಮಾಡಲು ಸರಕಾರ ಮುಂದಾಗಬೇಕು ಎಂದು ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಸೂಚಿಸಿದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಪೇಜಾವರ ಶ್ರೀಗಳ ಅಭಿಪ್ರಾಯವನ್ನು ಆಲಿಸಿ, ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ. ಪೂಜ್ಯರಾದ ಶ್ರೀಗಳ ಭಾವನೆಗಳನ್ನು ಅರ್ಥಮಾಡಿಕೊಂಡು ಶ್ರೀರಾಮಮಂದಿರದ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಹಾಗೂ ಗೋವುಗಳ ಸಂರಕ್ಷಣೆಗೆ ನಮ್ಮ ಸರಕಾರವು ಬದ್ಧವಾಗಿದೆ ಎಂದು ತಿಳಿಸಿದರು.