ಹೊಸ ದಿಗಂತ ವರದಿ, ಬಳ್ಳಾರಿ:
ಹಳ್ಳಿ ಅಖಾಡ ಗ್ರಾ.ಪಂ.ಚುನಾವಣೆಯಲ್ಲಿ ತೀವ್ರ ಜಿದ್ದಾ ಮಧ್ಯೆ ಭರ್ಜರಿ ಗೆಲುವು ಸಾಧಿಸಿದ್ದ ಮಂಗಳಮುಖಿ ಅಂಜಿನೆಮ್ಮ ಅವರನ್ನು ಜಿಲ್ಲೆಯ ಚೋರನೂರ ಗ್ರಾಮದಲ್ಲಿ ಭಾನುವಾರ ಸನ್ಮಾನಿಸಿ ಗೌರವಿಸಲಾಯಿತು.
ಸಂಡೂರು ತಾಲೂಕು ವ್ಯಾಪ್ತಿಯ ಚೋರನೂರು ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಗ್ರಾಮದ 1ನೇ ವಾರ್ಡ್ ನಿಂದ ಸ್ಪರ್ಧಿಸಿದ್ದ ಮಂಗಳಮುಖಿ ಅಂಜಿನಮ್ಮ ಅವರು 18 ಮತಗಳಿಂದ ಭರ್ಜರಿ ಗೆಲುವು ಸಾಧಿಸಿ ಗಮನಸೆಳೆದಿದ್ದಾರೆ. ಶಾಸಕ ಈ.ತುಕಾರಾಂ ಸೇರಿದಂತೆ ವಿವಿಧ ಗಣ್ಯರು ಸನ್ಮಾನಿಸಿ ಗೌರವಿಸಿದರು. ನಂತರ ನೂತನ ಸದಸ್ಯೆ ಅಂಜಿನೆಮ್ಮ ಮಾತನಾಡಿ, ವಾರ್ಡ್ ನ ಸಮಗ್ರ ಅಭಿವೃದ್ಧಿ ಕನಸು ಇಟ್ಟುಕೊಂಡಿರುವ ನನ್ನನ್ನು ಮತದಾರ ಪ್ರಭುಗಳು ಆರ್ಶಿವಾದಿಸಿದ್ದು, ಈ ಗೆಲುವು ನನ್ನದಲ್ಲ ಇದು ನನ್ನ ವಾರ್ಡ್ ನ ಸಮಸ್ತ ನಾಗರಿಕರಿಗೆ ಸಮರ್ಪಿಸುವೆ. ಜನರ ನಿರೀಕ್ಷೆಯಂತೆ ಅವಧಿಯಲ್ಲಿ ಕೆಲಸ ನಿರ್ವಹಿಸಿ ನಿಮ್ಮೆಲ್ಲರ ಪ್ರಿತಿ ವಿಶ್ವಾಸ ಗಳಿಸುವೆ. ನೀವು ಅಂದುಕೊಂಡಂತೆ ವಾರ್ಡ ನ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸುವೆ ಎಂದರು. ಇದಕ್ಕೂ ಮುನ್ನ ಶಾಸಕ ಈ. ತುಕಾರಾಂ ಅವರು ಅಭಿನಂದಿಸಿದರು. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಜಯರಾಮ್, ಎಚ್.ಟಿ ವೆಂಕಟೇಶ್, ಸೋಮಶೇಖರ್ ವಿವಿಧ ಮುಖಂಡರು ಇತರರು ಉಪಸ್ಥಿತರಿದ್ದರು.