ಬಳ್ಳಾರಿ: ಚಲನಚಿತ್ರ ನಿರ್ಧೇಶಕ, ನಿರ್ಮಾಪಕ, ನ್ಯಾಯವಾದಿ ಬಿ.ಆರ್.ನಟರಾಜ್ (73) ಅವರು ನಿಧನರಾದರು.
ನಾನಾ ಖಾಯಿಲೆಯಿಂದ ಬಳಲುತ್ತಿದ್ದ ಅವರು ಬುಧವಾರ ನಿಧನರಾಗಿದ್ದು, ಪತ್ನಿ ಹಾಗೂ ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳು, ಚಿತ್ರಕಲಾವಿಧರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ನಗರದಲ್ಲಿ ನಡೆಯಿತು. ಅನೇಕ ಗಣ್ಯರು, ಕಲಾವಿಧರು ಹಾಗೂ ಬಂಧು ಮಿತ್ರರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಅಂತಿಮ ನಮನ ಸಲ್ಲಿಸಿದರು.
ಬಿ.ಆರ್. ನಟರಾಜ್ ವಕೀಲ ವೃತ್ತಿ ಜೊತೆಗೆ ಚಿತ್ರರಂಗದಲ್ಲೂ ಸಾಕಷ್ಟು ಹೆಸರು ಮಾಡಿದ್ದರು. ‘ಸೂರ್ಯ ಶಿಕಾರಿ’ ಎನ್ನುವ ಚಿತ್ರವನ್ನು ಅವರೇ ನಿರ್ಮಿಸಿ, ನಟಿಸಿ ಪ್ರೇಕ್ಷಕರ ಗಮನಸೆಳೆದಿದ್ದರು. ಹೆಸರಾಂತ ಲೇಖಕ ಬರಗೂರು ರಾಮಚಂದ್ರಪ್ಪ ಅವರ ‘ಸೂರ್ಯ ಶಿಕಾರಿ’ ಕಾದಂಬರಿಯನ್ನು ಕಳೆದ 1985 ರಲ್ಲಿ ಸಿನಿಮಾವಾಗಿ ನಿರ್ಮಿಸಿ ಇತರರಿಗೆ ಮಾದರಿಯಾಗಿದ್ದರು. ಇದರ ಜೊತೆಗೆ ಅನೇಕ ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.ಈ ಚಿತ್ರಕ್ಕೆ ರಾಜ್ಯವಷ್ಟೇ ಅಲ್ಲ ದೇಶ ವಿದೇಶಗಳಲ್ಲಿ ಒಳ್ಳೆ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಚಿತ್ರದ ನಂತರ ‘ಕೆಂಪು ನಿಶಾದಿ’ ಎನ್ನುವ ಚಿತ್ರವನ್ನು ನಿರ್ಮಿಸಿದ್ದರು. ಆದರೆ, ಈ ಚಿತ್ರ ಅಷ್ಟೊಂದು ಯಶಸ್ಸು ಕಾಣಲಿಲ್ಲ. ‘ಸೂರ್ಯ ಶಿಕಾರಿ’ ಚಿತ್ರದ ಮೂಲಕ ರೋಹಿಣಿ ಹಟ್ಟಂಗಡಿ ಅವರನ್ನು ಮೊದಲ ಬಾರಿಗೆ ಕನ್ನಡಕ್ಕೆ ಕರೆತಂದ ಕಿರ್ತೀಗೆ ಭಾಜನರಾಗಿದ್ದರು. ಈ ಚಿತ್ರದಲ್ಲಿ ರೋಹಿಣಿ ಗೌಡತಿ ಪಾತ್ರದಲ್ಲಿ ಹಾಗೂ ಹಿರಿಯ ನಟ ದಿ. ಲೋಕೇಶ್ ಅವರು ಜಮೀನ್ದಾರನ ಪಾತ್ರದಲ್ಲಿ ನಟಿಸಿದ್ದರು. ನಟರಾಜ್ ಉತ್ತಮ ಗಾಯಕ ಕೂಡಾ ಆಗಿದ್ದರು. ಜೊತೆಗೆ ಅನೇಕ ನಾಟಕಗಳಲ್ಲಿ ಅವರು ನಟಿಸಿದ್ದು ದುರ್ಯೋಧನ ಹಾಗೂ ಅರ್ಜುನನ ಪಾತ್ರದಲ್ಲಿ ಅಭಿನಯಿಸಿದ್ದರು. ಸುಮಾರು 6 ಚಿತ್ರಗಳನ್ನು ನಿರ್ಮಿಸುವ ಮೂಲಕ ಗಣಿನಾಡು ಬಳ್ಳಾರಿ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದರು.
ಗಣ್ಯರ ಸಂತಾಪ: ಹಿರಿಯ ನಟ, ನಿರ್ಮಾಪಕ ನಟರಾಜ್ ಅವರ ನಿಧನ ಹಿನ್ನೆಲೆ, ಸಾಹಿತಿ, ಬರಗೂರು ರಾಮಚಂದ್ರಪ್ಪ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಹೆಚ್. ಎಂ. ಅಂಕಲಯ್ಯ, ಕಲಾವಿಧರಾದ ಕೆ.ಎಸ್.ಸತ್ಯನಾರಾಯಣ ರಾವ್ ಸೇರಿದಂತೆ ಅಪಾರ ಸ್ನೇಹಿತರು, ಬಂಧುಗಳು ಸಂತಾಪ ಸೂಚಿಸಿದ್ದಾರೆ.