ಹೊಸ ದಿಗಂತ ವರದಿ, ವಿಜಯಪುರ:
ನಗರದಲ್ಲಿ ಪ್ರತ್ಯೇಕ 6 ಮನೆಗಳಲ್ಲಿ ಚಿನ್ನಾಭರಣ ಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಲಕ್ಷಾಂತರ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೋಹಿತ ರಾಮು ಕಾಯಗೊಂಡ, ಅಸ್ಲಂ ಮಹಿಬೂಬ್ ಸಣದಿ ಬಂಧಿತ ಆರೋಪಿಗಳಾಗಿದ್ದಾರೆ. ರೋಹಿತ ರಾಮು ಕಾಯಗೊಂಡ ಬಂಧಿತ ಆರೋಪಿಯಿಂದ ಪ್ರತ್ಯೇಕ ಎರಡು ಮನೆಗಳಲ್ಲಿ 10.1 ತೊಲಿ ಚಿನ್ನ, 27 ತೊಲಿ ಬೆಳ್ಳಿ ಸೇರಿ 4 ಲಕ್ಷ 96 ಸಾವಿರದ 200 ರೂ.ಗಳ ಮೌಲ್ಯದ ಬೆಳೆಬಾಳುವ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಅಲ್ಲದೇ, ಸ್ಯಾಟ್ ಲೈಟ್ ಬಸ್ ನಿಲ್ದಾಣದಲ್ಲಿ ಅನುಮಾಸ್ಪದವಾಗಿ ತಿರುಗಾಡುತ್ತಿದ್ದ ಅಸ್ಲಂ ಮಹಿಬೂನ್ ಸಣದಿಯನ್ನ ಬಂಧಿಸಿ ಪೊಲೀಸರು ವಿಚಾರಣೆ ಮಾಡಿದ್ದಾಗ ನಗರದ 4 ಮನೆಗಳಲ್ಲಿ ಚಿನ್ನಾಭರಣ ಕಳವು ಮಾಡಿರುವ ಕುರಿತು ತಪ್ಪೊಪ್ಪಿಕೊಂಡಿದ್ದು, 10 ತೊಲಿ ಚಿನ್ನ ಸೇರಿದಂತೆ ವಿವಿಧ ಬೆಳೆಬಾಳುವ ವಸ್ತುಗಳು ಸೇರಿ 4 ಲಕ್ಷ 80 ಸಾವಿರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಒಟ್ಟು 6 ಮನೆಗಳಲ್ಲಿನ 20.1 ತೊಲಿ ಚಿನ್ನ, 27 ತೊಲಿ ಬೆಳ್ಳಿ ಸೇರಿ 9 ಲಕ್ಷ 76 ಸಾವಿರದ 200 ರುಪಾಯಿ ಮೌಲ್ಯದ ವಸ್ತುಗಳು ಜಪ್ತಿ ಮಾಡಲಾಗಿದೆ ಎಂದರು.
702 ಎಂಒಬಿ, 78 ಆರೋಪಿಗಳ ವಿರುದ್ಧ ರೌಡಿ ಶೀಟರ್:
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ತೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ 702 ಎಂಒಬಿ ಹಾಗೂ 78 ಜನ ಆರೋಪಿಗಳ ವಿರುದ್ಧ ರೌಡಿಶೀಟರ್ ಓಪನ್ ಮಾಡಲಾಗಿದೆ ಎಂದರು.
ಅಲ್ಲದೆ 8 ಜನ ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆ ಅಡಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಆರೋಪಿಗಳಾದ ಚಾಂಚಶಫೀರ ಮಹಮ್ಮದಗೌಸ್ ಇನಾಮದಾರ (12 ಪ್ರಕರಣ), ಸೈಫನಸಾಬ್ ರಜಾಕ್ಸಾಬ್ ಮಕಾನದಾರ (11 ಪ್ರಕರಣ), ಸತೀಶ ದನರಾಜ ನಾಯಕ (14 ಪ್ರಕರಣ), ದೇವೇಂದ್ರ ಸಿದ್ದಪ್ಪ ತದ್ದೇವಾಡಿ (16 ಪ್ರಕರಣ), ಚಂದ್ರಶೇಖರ ಹಣಮಂತಪ್ಪ ವಾಡೇ (08 ಪಕರಣ), ಸಂಗನಗೌಡ ಸಂಕನಾಳ (04 ಪ್ರಕರಣ), ಹೈದರಅಲಿ ಬಾಬುಸಾಬ ನದಾಫ್ (15 ಪ್ರಕರಣ), ಪೀರಪ್ಪ ಸುಭಾಸ ಕಟ್ಟಿಮನಿ (07 ಪ್ರಕರಣ) ಈ ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಚಾಂಚಶಫೀರ ಮಹಮ್ಮದಗೌಸ್ ಇನಾಮದಾರ, ಸೈಫನಸಾಬ್ ರಜಾಕ್ಸಾಬ್ ಮಕಾನದಾರ, ಸತೀಶ ದನರಾಜ ನಾಯಕ ಮೇಲೆ ಗೂಂಡಾ ಕಾಯ್ದೆ ಅಡಿಯಲ್ಲಿ ಗಡಿ ಪಾರು ಮಾಡಲು ಅನುಮೋದಿಸಲಾಗಿದೆ ಎಂದರು.
ಡಿವೈಎಸ್ಪಿ ಲಕ್ಷ್ಮೀ ನಾರಾಯಣ, ಸಿಪಿಐ ರವೀಂದ್ರ ನಾಯ್ಕೋಡಿ, ಪಿಎಸ್ಐಗಳಾದ ಶರಣಗೌಡ ಪಾಟೀಲ, ಆನಂದ ಠಕ್ಕಣ್ಣವರ ಸೇರಿದಂತೆ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.