ಬೆಂಗಳೂರು: ಚಿರಂಜೀವಿ ಸರ್ಜಾ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು, ನಿದ್ದೆ ಮಾತ್ರೆ ಸೇವಿಸುತ್ತಿದ್ದರು ಎಂದೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಡಲಾಗುತ್ತಿದೆ. ಇವೆಲ್ಲಾ ಸುಳ್ಳು ಸುದ್ದಿ, ಯಾರೂ ಈ ವದಂತಿಗಳನ್ನು ನಂಬಬೇಡಿ ಎಂದು ಸರ್ಜಾ ಕುಟುಂಬದ ಆಪ್ತ ಪ್ರಶಾಂತ್ ಸಂಬರ್ಗಿ ಮನವಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿರಂಜೀವಿ ಸರ್ಜಾಗೆ ಯಾವುದೇ ದುರಾಭ್ಯಾಸ ಇರಲಿಲ್ಲ. ಆದರೂ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ನೊಂದು ನುಡಿದರು. ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ಬಗ್ಗೆ ಆಸ್ಪತ್ರೆ ಕೂಡ ಇದೇ ವರದಿ ನೀಡಿದೆ. ಚಿರಂಜೀವಿ ಸರ್ಜಾ ಮಧ್ಯಾಹ್ನ 2.20ಕ್ಕೆ ಆಸ್ಪತ್ರೆಗೆ ಕರೆತರಲಾಗಿದ್ದು ತಕ್ಷಣವೇ ಎಮರ್ಜೆನ್ಸಿ ವಾರ್ಡ್ಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡುವ ಕಾರ್ಯ ಮಾಡಲಾಯಿತು. ಪರೀಕ್ಷೆ ನಡೆಸಿದಾಗ ದೇಹದಲ್ಲಿ ಸ್ಪಂದನೆ ಇರಲಿಲ್ಲ. ಅತ್ಯಾಧುನಿಕ ತಂತ್ರಜ್ಞಾನ ಉಪಕರಣ ಬಳಸಿ ಎದೆಯೊತ್ತಿ ಉಸಿರು ನೀಡುವ ಸಿಪಿಆರ್ ಚಿಕಿತ್ಸೆ ಆರಂಭಿಸಲಾಯಿತು. ಮೂರು ಬಾರಿ ಸಿಪಿಆರ್ ಚಿಕಿತ್ಸೆಯಲ್ಲಿ ಯಶಸ್ವಿಯಾದರೂ ಬಳಿಕ ಸ್ಪಂದನೆ ದೊರೆಯಲಿಲ್ಲ. 3.48ಕ್ಕೆ ಚಿರಂಜೀವಿ ಸರ್ಜಾ ನಿಧನರಾಗಿದ್ದಾರೆ ಎಂದು ಘೋಷಿಸಲಾಯಿತು ಎಂದು ಅವರು ಮಾಹಿತಿ ನೀಡಿದರು.