ಬೀಜಿಂಗ್: ಕಲ್ಲಿದ್ದಲು ಗಣಿಗಾರಿಕೆ ವೇಳೆ ಸಂಭವಿಸಿದ ದುರಂತದಲ್ಲಿ 16 ಕಾರ್ಮಿಕರು ಬಲಿಯಾಗಿರುವ ಘಟನೆ ನೈಋತ್ಯ
ಚೀನಾದಲ್ಲಿ ನಡೆದಿದೆ. ಒಬ್ಬ ಕಾರ್ಮಿಕನ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ.
ಭಾನುವಾರ ಬೆಳಗ್ಗೆ ಕನ್ವೆಯರ್ ಸ್ಫೋಟದಲ್ಲಿ ಅಪಾಯಕಾರಿ ಹಂತದ ಕಾರ್ಬನ್ ಮೊನಾಕ್ಸೈಡ್ ಬಿಡುಗಡೆಯಾದ ಪರಿಣಾಮ 16 ಕಾರ್ಮಿಕರು ತನ್ನ ಪ್ರಾಣ ತೆತ್ತಿದ್ದಾರೆ. ಬದುಕುಳಿದವರ ಪ್ರಾಣ ಉಳಿಸಲು ವೈದ್ಯರು ಶ್ರಮಿಸುತ್ತಿದ್ದಾರೆ ಎಂದು ಚೀನಾ ಸರ್ಕಾರಿ ಅಧೀನದ ಕ್ಸಿನುವಾ ಸುದ್ದಿಸಂಸ್ಥೆ ತಿಳಿಸಿದೆ.
ಘಟನೆಗೆ ಕಾರಣ ಏನೆಂದು ಇನ್ನೂ ತಿಳಿದಿಲ್ಲ. ತನಿಖೆ ನಡೆಸಲಾಗುತ್ತಿದೆ ಎಂದು ಕ್ವಿಜಿಯಾಂಗ್ ಜಿಲ್ಲೆಯ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.
ಕಲ್ಲಿದ್ದಲು ದುರಂತ ಸರ್ವೇ ಸಾಮಾನ್ಯ
ಚೀನಾದಲ್ಲಿ ಕಲ್ಲಿದ್ದಲು ಗಣಿಗಾರಿಕೆ ನಿಕ್ಷೇಪಗಳಲ್ಲಿ ದುರಂತಗಳು ಸಂಭವಿಸುತ್ತಿರುವುದು ಇತ್ತೀಚಿಗೆ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಕೈಗಾರಿಕೆಗಳಲ್ಲಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದಿದ್ದಾಗ ಮತ್ತು ಸರ್ಕಾರದ ನಿಯಮಗಳ ಪಾಲಿಸದ ಸಂದರ್ಭ ಇಂಥ ದುರಂತಗಳು ಸಂಭವಿಸುತ್ತವೆ. ಕಳೆದ ಡಿಸೆಂಬರ್ ತಿಂಗಳಿನಲ್ಲಿ ನೈಋತ್ಯ ವಿಭಾಗದ ಕ್ವಿಜಾವೋ ಪ್ರದೇಶದಲ್ಲಿ ಸಂಭವಿಸಿದ ಕಲ್ಲಿದ್ದಲು ಅನಿಲ ಸ್ಫೋಟದಲ್ಲಿ ಕನಿಷ್ಠ 14 ಮಂದಿ ಪ್ರಾಣ ಬಿಟ್ಟಿದ್ದರು.