ಹೊಸದಿಗಂತ ವರದಿ, ಮಂಗಳೂರು:
ಚೆಕ್ ಬೌನ್ಸ್ ಪ್ರಕರಣದಲ್ಲಿ ಜಾಮೀನು ರಹಿತ ಬಂಧನದ ವಾರೆಂಟ್ ಎದುರಿಸುತ್ತಿರುವ ಹಿರಿಯ ನಟಿ ಪದ್ಮಜಾ ರಾವ್ ಗುರುವಾರ ಮಂಗಳೂರಿನ ನ್ಯಾಯಾಲಯದ ಮುಂದೆ ಹಾಜರಾಗಿ ಜಾಮೀನು ಪಡೆದುಕೊಂಡಿದ್ದಾರೆ.
ಈ ಸಂದರ್ಭ ಸುದ್ದಿಗಾರರ ಜತೆ ಮಾತನಾಡಿದ ಅವರು, ನನಗೆ ಕಾನೂನು ಹಾಗೂ ನ್ಯಾಯಾಲಯದ ಮೇಲೆ ಸಂಪೂರ್ಣ ಭರವಸೆ ಇದೆ. ನಾನು ಗೆದ್ದೇ ಗೆಲ್ಲುವೆನೆಂಬ ಭರವಸೆಯೂ ನೂರು ಪ್ರತಿಶತದಷ್ಟಿದೆ. ಇದಕ್ಕಾಗಿ ಎಲ್ಲರೂ ಕಾಯಬೇಕಷ್ಟೇ. ಈಗ ನಾನು ಏನು ಹೇಳಲಾರೆ ಎಂದು ಹೇಳಿದರು.
ನನ್ನ ಮೇಲೆ ಹೊರಿಸಿರುವ ಆರೋಪದ ಬಗ್ಗೆ ಹೋರಾಡಲು ಕೋರ್ಟ್, ಕಚೇರಿ ಇದೆ. ಈ ಪ್ರಕರಣದಲ್ಲಿ ನಾನು ಗೆದ್ದೇ ಗೆಲ್ಲುತ್ತಾನೆ ಎಂದರು.
ನಟ, ನಿರ್ದೇಶಕ ವೀರೇಂದ್ರ ಶೆಟ್ಟಿ ಒಡೆತನದ ಮಂಗಳೂರಿನ ವೀರೂ ಟಾಕೀಸ್ ಪ್ರೊಡಕ್ಷನ್ಸ್ ಸಂಸ್ಥೆಯಿಂದ ನಟಿ ಪದ್ಮಜಾ ಅವರು ಹಂತ ಹಂತವಾಗಿ 41 ಲಕ್ಷ ರೂ. ಸಾಲ ಪಡೆದಿದ್ದರು. ಸಾಲದ ಭದ್ರತೆಗೆ ಅವರು ೪೦ ಲಕ್ಷ ರೂ. ಚೆಕ್ ನೀಡಿದ್ದರು. ಪದ್ಮಜಾ ಅವರು ಸಾಲದ ಹಣ ಮರು ನೀಡದ ಹಿನ್ನೆಲೆ ಬ್ಯಾಂಕ್ಗೆ ಚೆಕ್ ಹಾಕಲಾಗಿತ್ತು. ಆದರೆ, ಬ್ಯಾಂಕ್ನಲ್ಲಿ ಹಣವಿಲ್ಲದ ಸಂಬಂಧ ಚೆಕ್ ಬೌನ್ಸ್ ಆಗಿತ್ತು.
ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಆದ್ದರಿಂದ ಮಂಗಳೂರಿನ ಐದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನೀಡಿರುವ ಸಮನ್ಸ್ ಸ್ವೀಕರಿಸಲು ನಿರಾಕರಿಸುತ್ತಿದ್ದ ಪದ್ಮಜಾ ರಾವ್ಗೆ ವಾರೆಂಟ್ ಜಾರಿಯಾಗಿತ್ತು. ಈ ಸಂಬಂಧ ಅವರು ಗುರುವಾರ ಮಂಗಳೂರಿನ ಐದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮುಂದೆ ಹಾಜರಾದರು.
ಪದ್ಮಜಾ ರಾವ್ ಅವರನ್ನು ಬಂಧಿಸಿ ಕರೆ ತರುವಂತೆ ಮಂಗಳೂರಿನ ನ್ಯಾಯಾಲಯ ಬೆಂಗಳೂರಿನ ತಲಘಟ್ಟಪುರ ಪೊಲೀಸರ ಮೂಲಕ ವಾರಂಟ್ ಜಾರಿ ಮಾಡಿತ್ತು. ಅದರಂತೆ ಪೊಲೀಸರು ಅವರನ್ನು ಬಂಧಿಸಿ ಮಾ.೮ರಂದು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿತ್ತು. ಆದರೆ ಪದ್ಮಜಾ ವಾರಂಟ್ ಆದೇಶದ ಪ್ರತಿ ಸಿಗುತ್ತಿದ್ದಂತೆ ತಮ್ಮ ವಕೀಲರ ಮೂಲಕ ಮಂಗಳೂರಿನ 5ನೇ ಜೆಎಂಎಫ್ಸಿ ನ್ಯಾಯಾಲಯಕ್ಕೆ ಆಗಮಿಸಿ ನ್ಯಾಯಾಧೀಶರ ಮುಂದೆ ಹಾಜರಾಗಿ, ಬಾಂಡ್ ಆಧಾರದಲ್ಲಿ ಜಾಮೀನು ಪಡೆದಿದ್ದಾರೆ.