ಧಾರವಾಡ: ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ನೂತನವಾಗಿ ಸ್ಥಾಪಿಸಿದ 6 ಸಾವಿರ ಲೀಟರ್ ಸಾಮರ್ಥ್ಯದ ಕೇಂದ್ರೀಕೃತ ಆಕ್ಸಿಜನ್ ಪೂರೈಕೆಯ ಘಟಕಕ್ಕೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬುಧವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಡಿಸಿ ನಿತೇಶ, ಜಿಲ್ಲಾಸ್ಪತ್ರೆಯಲ್ಲಿ ಈವರೆಗೆ ಪ್ರತಿದಿನ 80ರಿಂದ 100 ಜಂಬೋ ಆಕ್ಸಿಜನ್ ಸಿಲಿಂಡರ್ ವೈದ್ಯಕೀಯ ಚಿಕಿತ್ಸೆಗೆ ಬಳಸುತ್ತಿತ್ತು. ಇವುಗಳನ್ನು ಪ್ರತಿದಿನ ಪೂರೈಕೆದಾರರ ಬಳಿ ತೆಗೆದುಕೊಂಡು ಹೋಗಿ ತುಂಬಿಸಿಕೊಂಡು ಬರಬೇಕಾಗಿತ್ತು ಎಂದರು.
ಈಗ 6 ಸಾವಿರ ಲೀಟರ್ ಸಾಮರ್ಥ್ಯದ ಕೇಂದ್ರೀಕೃತ ಆಕ್ಸಿಜನ್ ಪೂರೈಕೆ ಘಟಕ ಸ್ಥಾಪನೆಯಿಂದ ಸಮಯ, ಸಾರಿಗೆ ವೆಚ್ಚ ಉಳಿಯಲಿದೆ.ಸುರಕ್ಷತೆ ಮತ್ತು ಲಭ್ಯತೆ ದೃಷ್ಟಿಯಿಂದಲೂ ಸಾಕಷ್ಟು ಅನುಕೂಲವಾಗಲಿದೆ.ಧಾರವಾಡ ಜನತೆಗೆ ,ಜಿಲ್ಲಾ ಆಸ್ಪತ್ರೆಗೆ ಇದೊಂದು ಶಾಶ್ವತ ಆಸ್ತಿಯಾಗಲಿದೆ. ಈ ಘಟಕ ಸ್ಥಾಪನೆ ಪ್ರಕ್ರಿಯೆಗೆ ಸರ್ಕಾರದ ಮಟ್ಟದಲ್ಲಿ ತ್ವರಿತ ಆರ್ಥಿಕ ಮತ್ತು ತಾಂತ್ರಿಕ ಅನುಮೋದನೆ ದೊರೆತು ಸಾಕಷ್ಟು ಸಹಕಾರ ಸಿಕ್ಕಿದೆ ಎಂದರು.
ಜಿಲ್ಲೆಯಲ್ಲಿ ಕೋವಿಡ್ ಚಿಕಿತ್ಸೆಗೆ ಕಿಮ್ಸ್ ಸಂಸ್ಥೆ ದೊಡ್ಡ ಕೊಡುಗೆ ನೀಡಿದೆ. ಇದೇ ತೆರನಾಗಿ ಧಾರವಾಡ ಜಿಲ್ಲಾಸ್ಪತ್ರೆಯೂ ಕೋವಿಡ್ ಗೆ ಉತ್ತಮ ಚಿಕಿತ್ಸೆ ನೀಡುತ್ತಿದೆ.ಇದುವರೆಗೆ ಇಲ್ಲಿಂದ ಸುಮಾರು 540 ಕ್ಕೂ ಹೆಚ್ಚು ರೋಗಿಗಳು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.ಸಿಬ್ಬಂದಿ, ಮಾನವ ಸಂಪನ್ಮೂಲ, ತಜ್ಞ ವೈದ್ಯರ ಕೊರತೆಯ ನಡುವೆಯೂ ಜಿಲ್ಲಾ ಶಸ್ತ್ರಚಿಕಿತ್ಸಕರು ಹಾಗೂ ವೈದ್ಯಾಧಿಕಾರಿಗಳು ಅಹರ್ನಿಶಿ ದುಡಿಯುತ್ತಿರುವುದು ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿಗಳು ತುಂಬು ಹೃದಯದಿಂದ ಶ್ಲಾಘಿಸಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಕುಮಾರ್ ಮಾನಕರ್, ಡಾ.ಸಿ.ಡಿ.ಕಳಸಗೌಡರ,ಡಾ.ಎಸ್.ವಿ.ಸಾನು,ಡಾ.ಶಿವಕುಮಾರ್ ಕುಂಬಾರ, ಉಪ ಔಷಧ ನಿಯಂತ್ರಕ ಕೆ.ಎಸ್.ಮಲ್ಲಿಕಾರ್ಜುನ,ಆರೋಗ್ಯ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಜಗನ್ನಾಥ ಜಾಧವ,ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸುರೇಶ, ಉಪಕರಣ ಇಂಜಿನಿಯರ್ ಲಾಳಗೆ ಇದ್ದರು.