ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಪಶ್ಚಿಮ ಬಂಗಾಳದ ಡೈಮಂಡ್ ಹಾರ್ಬರ್ ಪ್ರದೇಶಕ್ಕೆ ತೆರಳುತ್ತಿದ್ದಾಗ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ. ಪಿ. ನಡ್ಡಾ ಅವರ ಬೆಂಗಾವಲು ವಾಹನದ ಮೇಲೆ ನಡೆದ ದಾಳಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಖಂಡಿಸಿದ್ದಾರೆ.
ಇಂದು, ಬಂಗಾಳದಲ್ಲಿ ಜೆ. ಪಿ. ನಡ್ಡಾ ಅವರ ಮೇಲಿನ ದಾಳಿಯನ್ನು ಕೇಂದ್ರ ಸರಕಾರ ಬಹಳ ಗಂಭೀರವಾಗಿ ಪರಿಗಣಿಸುತ್ತಿದೆ. ಈ ಪ್ರಾಯೋಜಿತ ಹಿಂಸಾಚಾರಕ್ಕೆ ಬಂಗಾಳ ಸರ್ಕಾರವು, ರಾಜ್ಯದ ಶಾಂತಿ ಪ್ರಿಯ ಜನರಿಗೆ ಉತ್ತರಿಸಬೇಕಾಗಿದೆ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
ತೃಣಮೂಲ ಆಡಳಿತದಲ್ಲಿ ಬಂಗಾಳ ದಬ್ಬಾಳಿಕೆ, ಅರಾಜಕತೆ ಮತ್ತು ಕತ್ತಲೆಯ ಯುಗಕ್ಕೆ ಸಾಗಿದೆ. ಟಿಎಂಸಿ ಆಳ್ವಿಕೆಯಲ್ಲಿ ರಾಜಕೀಯ ಹಿಂಸಾಚಾರ ಸಾಂಸ್ಥೀಕರಣಗೊಳಿಸಲಾಗಿದೆ. ಇದರಿಂದ ಪ್ರಜಾಪ್ರಭುತ್ವದ ಮೌಲ್ಯಗಳನ್ನು ನಂಬುವ ಜನರಲ್ಲಿ ಆತಂಕ ಸೃಷ್ಠಿಯಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ನಡ್ಡಾ, ಇಂದು ನಡೆದ ಘಟನೆಯು ರಾಜ್ಯದಲ್ಲಿ ಅರಾಜಕತೆ ಮತ್ತು ಅಸಹಿಷ್ಣುತೆ ತೋರಿಸುತ್ತದೆ. ಇಲ್ಲಿ ರಾಜಕೀಯ ಚರ್ಚೆಗೆ ಸ್ಥಳವಿಲ್ಲ. ಮಮತಾ ಸರ್ಕಾರ ಕಾರ್ಯನಿರ್ವಹಿಸುತ್ತಿರುವ ರೀತಿ ಭಾರತೀಯ ಪ್ರಜಾಪ್ರಭುತ್ವಕ್ಕೆ ಹಾನಿಕಾರಕವಾಗಿದೆ ಎಂದು ಕಿಡಿಕಾರಿದ್ದಾರೆ.