ಹೊಸದಿಗಂತ ವರದಿ,ಕಾಸರಗೋಡು:
ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಎನ್ ಡಿಎ ಜಯ ಗಳಿಸಿದ ಬಳಿಕ ಪಾಲಕ್ಕಾಡು ಮಹಾನಗರ ಪಾಲಿಕೆ ಕಟ್ಟಡದಲ್ಲಿ ಬಿಜೆಪಿ ಕಾರ್ಯಕರ್ತರು ಜೈ ಶ್ರೀರಾಮ್ ಫ್ಲೆಕ್ಸ್ ಬೋರ್ಡ್ ತೂಗು ಹಾಕಿದ ಘಟನೆಯನ್ನು ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಮುರಳೀಧರನ್ ಸಮರ್ಥಿಸಿಕೊಂಡಿದ್ದಾರೆ.
ಪಕ್ಷದ ಕಾರ್ಯಕರ್ತರು ಜೈ ಶ್ರೀರಾಮ್ ಫ್ಲೆಕ್ಸ್ ಅಳವಡಿಸಿರುವುದು ದೊಡ್ಡ ಅಪರಾಧವೇನಲ್ಲ ಎಂದು ಅವರು ಕೊಚ್ಚಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಅಭಿಪ್ರಾಯಪಟ್ಟರು. ಘಟನೆಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿರುವಂತೆ ಕೇಂದ್ರ ಸಚಿವರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಶ್ರೀರಾಮನು ಜಾತಿ, ಮತ, ಧರ್ಮಗಳ ಹೊರತಾಗಿ ಆದರ್ಶಯುತವಾಗಿದ್ದ ಮಹಾಪುರುಷ ಎಂದು ಸಚಿವರು ಹೇಳಿದರು. ಜೈ ಶ್ರೀರಾಮ್ ಎಂದು ಕರೆಯುವುದು ಅಪರಾಧವೆಂದು ಹಾಗೂ ಅದು ತಪ್ಪೆಂದು ದೇಶದಲ್ಲಿ ಯಾರೂ ಹೇಳಿಲ್ಲ ಎಂದು ವಿ.ಮುರಳೀಧರನ್ ನುಡಿದರು.
ಇದೇ ವೇಳೆ ಕೇರಳದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣಾ ಫಲಿತಾಂಶದ ದಿನದಂದು ಪಾಲಕ್ಕಾಡು ಮಹಾನಗರ ಪಾಲಿಕೆ ಕಚೇರಿಯಲ್ಲಿ ಜೈ ಶ್ರೀರಾಮ್ ಫ್ಲೆಕ್ಸ್ ಅಳವಡಿಸಿದ ಘಟನೆ ನಡೆದಿದೆ. ಮಹಾನಗರ ಪಾಲಿಕೆಯಲ್ಲಿ ಗೆಲುವು ಸಾಧಿಸಿದ ನಂತರ ಬಿಜೆಪಿ ಕಾರ್ಯಕರ್ತರು ಕಟ್ಟಡದ ಮೇಲ್ಭಾಗಕ್ಕೆ ತೆರಳಿ ಶಿವಾಜಿಯ ಚಿತ್ರದೊಂದಿಗೆ ಫ್ಲೆಕ್ಸ್ ಅನ್ನು ನೇತುಹಾಕಿ ಅದರ ಮೇಲೆ ಜೈ ಶ್ರೀರಾಮ್ ಎಂದು ಬರೆದಿದ್ದಾರೆ. ಇದಲ್ಲದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಫೋಟೋಗಳಿರುವ ಫ್ಲೆಕ್ಸ್ ಗಳನ್ನು ಕೂಡ ಕಟ್ಟಡದ ಒಂದು ಬದಿಯಲ್ಲಿ ನೇತುಹಾಕಲಾಗಿತ್ತು. ಆ ಬಗ್ಗೆ ವೀಡಿಯೋ ವೈರಲ್ ಆಗಿದ್ದು , ಬಳಿಕ ಮಹಾನಗರ ಪಾಲಿಕೆ ಕಾರ್ಯದರ್ಶಿ ಮತ್ತು ಸಿಪಿಎಂ, ಮುಸ್ಲಿಂಲೀಗ್, ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಪೊಲೀಸರಿಗೆ ದೂರು ನೀಡಿದ್ದರು. ಮಹಾನಗರ ಪಾಲಿಕೆ ಕಾರ್ಯದರ್ಶಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ಮಧ್ಯೆ ಜೈ ಶ್ರೀರಾಮ್ ಫ್ಲೆಕ್ಸ್ ತೂಗು ಹಾಕಿದ ಪ್ರಕರಣದಲ್ಲಿ ಪೊಲೀಸರು ಕೇಸು ದಾಖಲಿಸಿದ್ದಾರೆ. ಅಲ್ಲದೆ ಜೈ ಶ್ರೀರಾಮ್ ಫ್ಲೆಕ್ಸ್ ಗೆ ವಿರುದ್ಧವಾಗಿ ಡಿವೈಎಫ್ಐ, ಸಿಪಿಎಂ ಕಾರ್ಯಕರ್ತರು ಸ್ಥಳದಲ್ಲೇ ರಾಷ್ಟ್ರ ಧ್ವಜವನ್ನು ನೇತುಹಾಕಿದ್ದಾರೆ ಎಂಬುದು ದೊಡ್ಡ ಸುದ್ದಿಯಾಗಿದೆ. ಮತ್ತೊಂದೆಡೆ ಸಿಪಿಎಂ, ಡಿವೈಎಫ್ ಐ ಸೇರಿದಂತೆ ಒಂದು ವಿಭಾಗವು ಘಟನೆ ಬಗ್ಗೆ ಭಾರೀ ವಿವಾದವನ್ನು ಹುಟ್ಟುಹಾಕಲು ಯತ್ನಿಸುತ್ತಿರುವುದು ವರದಿಯಾಗಿದೆ.