ಹೊಸದಿಗಂತ ವರದಿ,ರಾಮನಗರ:
ಕರ್ನಾಟಕದಲ್ಲಿ ಮರಾಠಿ ಪ್ರಾಧಿಕಾರ ಬೇಡವೇ ಬೇಡ, ಈ ಬಗ್ಗೆ ಕೂಡಲೇ ಸರ್ಕಾರ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ಆಗ್ರಹಿಸಿದರು.
ನಗರದ ಐಜೂರು ವೃತ್ತದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು ಕರ್ನಾಟಕದಲ್ಲಿ ಕನ್ನಡಿಗರನ್ನು ವಂಚಿಸಿ ಮರಾಠಿ ಪ್ರಾಧಿಕಾರ ಮಾಡಲು ಹೊರಟಿರುವುದು ಯಡಿಯೂರಪ್ಪ ಅವರ ಕೊಡುಗೆಯಾಗಿದೆ. ರಚನೆ ಮಾಡಲು ಸರ್ಕಾರ ಸಂಚು ನಡೆಸುತ್ತಿದೆ. ಬಸವ ಕಲ್ಯಾಣದಲ್ಲಿ ಚುನಾವಣೆ ದೃಷ್ಠಿಯಿರಿಸಿಕೊಂಡು 50 ಕೋಟಿ ಬಿಡುಗಡೆ ಮಾಡಿ ಗೆಲುವು ಸಾಧಿಸುವ ಚುನಾವಣಾ ಸಂಚಾಗಿದೆ.
ಇದನ್ನು ವಿರೋಧಿಸಿ ಮೊದಲ ಹಂತದಲ್ಲಿ ಕರ್ನಾಟಕ ಬಂದ್ ಮಾಡಿ ಹೋರಾಟ ಮಾಡಲಾಗಿದೆ. ಎರಡನೇ ಹಂತವಾಗಿ ಜ.9 ರ ಶನಿವಾರ ಇಡೀ ರಾಜ್ಯಾಧ್ಯಂತ ರೈಲು ಸತ್ಯಾಗ್ರಹ ಮಾಡಲಾಗುತ್ತಿದೆ. ಇದುವರೆಗೆ ಬಿ.ಎಸ್.ಯಡಿಯೂರಪ್ಪ ಸರ್ಕಾರ ಬಸವಣ್ಣ ನವರನ್ನು ಮರೆತಿದ್ದರು. ಈಗ 6 ರಂದು ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ಶಂಕುಸ್ಥಾಪನೆ ಮಾಡುತ್ತಿದ್ದಾರೆ. ಇದು ಇತಿಹಾಸ ತಿಳಿಯದ ಯಡಿಯೂರಪ್ಪ ಅವರ ಅನುಭವ ಮಂಟಪವಾಗಿದ್ದು, ಬಸವಣ್ಣನವರಿಗೆ, ಬಸವಕಲ್ಯಾಣಕ್ಕೆ ಮಾಡುತ್ತಿರುವ ಅಪಚಾರವಾಗಿದೆ. ಆಗಾಗಿ ಅಂದೇ ಅದನ್ನು ವಿರೋಧಿಸಿ ಬೆಂಗಳೂರಿನ ಬಸವಣ್ಣನವರ ಪ್ರತಿಮೆಯ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಸರ್ಕಾರ ಗ್ರಾಮದಿಂದ ಲೋಕಸಭೆ ವರೆಗೆ ಚುನಾವಣೆ ನಡೆಯುತ್ತಿದ್ದು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರಿಗೆ ನೀಡುತ್ತಿರುವ ಗೌರವಧನವನ್ನು ಹೆಚ್ಚಳ ಮಾಡಲು ಸರ್ಕಾರ ಕ್ರಮ ವಹಿಸಬೇಕು ಎಂದರು. ಪ್ರತಿಭಟನೆಯಲ್ಲಿ ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಎಂ.ಜಗದೀಶ್, ಜಿಲ್ಲಾಧ್ಯಕ್ಷ ಜಯ್ಕುಮಾರ್, ಪದಾಧಿಕಾರಿಗಳಾದ ಸುರೇಶ್, ಜಯರಾಮ್, ಚಂದ್ರಶೇಖರ್, ತ್ಯಾಗರಾಜು ಮತ್ತಿತರರು ಇದ್ದರು.