ಹೊಸ ದಿಗಂತ ವರದಿ ಮೈಸೂರು:
ಮರಾಠ ಪ್ರಾಧಿಕಾರ ರಚನೆ ಕೈಬಿಡುವಂತೆ ಆಗ್ರಹಿಸಿ ಡಿ.೫ಕ್ಕೆ ಕರ್ನಾಟಕ ಬಂದ್ ಮಾಡುವುದು ಶತಸಿದ್ದ ಎಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷರಾದ ಮಾಜಿ ಶಾಸಕ ವಾಟಾಳ್ ನಾಗರಾಜ್ ಹೇಳಿದರು.
ಭಾನುವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ.30ರ ವರೆಗೆ ರಾಜ್ಯ ಸರ್ಕಾರ ಮರಾಠ ಪ್ರಾಧಿಕಾರ ರಚನೆಯನ್ನು ಹಿಂಪಡೆಯಬೇಕು. ಈ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಠ ಮಾಡಬಾರದು. ಬಿ.ಎಸ್.ಯಡಿಯೂರಪ್ಪರಿಂದ ಕರ್ನಾಟಕ ಉದ್ದಾರ ಆಗೊಲ್ಲ, ಗಡಿನಾಡು ಉದ್ದಾರ ಆಗೋಲ್ಲ. ಕರ್ನಾಟಕ ಸರ್ಕಾರ ಮರಾಠರ ಅಭಿವೃದ್ಧಿಗೆ ಪ್ರಾಧಿಕಾರ ರಚನೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ತಮಿಳರು, ಆಂದ್ರದವರು, ಮಲೆಯಾಳಿಯವರು ಎಲ್ಲರೂ ಪ್ರಾಧಿಕಾರ ಕೇಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಬಿಎಸ್.ಯಡಿಯೂರಪ್ಪರಿಇಗೆ ಬುದ್ದಿ ಇದೆಯೋ, ಇಲ್ಲವೋಈ ಗೊತ್ತಿಲ್ಲ. ಎರಡು ವರ್ಷದ ಹಿಂದೆ ನಮ್ಮನ್ನು ಜೈಲಿನಲ್ಲಿಟ್ಟು ತಿರುವಳ್ಳುವರ್ ಪ್ರತಿಮೆ ಮಾಡಿದರು. ಬಸವ ಕಲ್ಯಾಣದಲ್ಲಿ ಚುನಾವಣೆ ಹಿನ್ನೆಲೆ ಅಲ್ಲಿರುವ 30ಸಾವಿರ ಮರಾಠ ಮತ ಪಡೆಯಲು ಪ್ರಾಧಿಕಾರ ರಚನೆ ಮಾಡಿದ್ದಾರೆ. ಸಿಎಂ ಯಡಿಯೂರಪ್ಪ ಬರೀ ಬೋಗಸ್ ಮಾಡುತ್ತಿದ್ದಾರೆ ಎಂದು ಕರ್ನಾಟಕ ಬಂದ್ ವಿಚಾರವಾಗಿ ಶಾಸಕರಾದ ಬಸವನಗೌಡ ಯತ್ನಾಳ್ ಹಾಗೂ ರೇಣುಕಾಚಾರ್ಯ ನೀಡಿರುವ ಹೇಳಿಕೆಗೆ ಕೆಂಡಾಮಂಡಲರಾದ ವಾಟಾಳ್ ನಾಗರಾಜ್, ರೇಣುಕಾಚಾರ್ಯ ವೀಡಿಯೋಗಳು ವಾಟ್ಸಾಪ್ ನಲ್ಲಿ ಹರಿದಾಡುತ್ತಿವೆ. ಅಂತಹವರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲವೆಂದು ವ್ಯಂಗ್ಯವಾಡಿದರು.