ಮಡಿಕೇರಿ: ರಾಜ್ಯದಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆಗೆ ಸಂಬಂಧಿಸಿದಂತೆ ಪೊಲೀಸರ ತನಿಖೆ ಚುರುಕಿನಿಂದ ಸಾಗಿದ್ದು ಚಿತ್ರ ಕಲಾವಿದರೂ ಸೇರಿದಂತೆ ಡ್ರಗ್ ಜಾಲದಲ್ಲಿ ತೊಡಗಿಸಿಕೊಂಡಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ನಡೆಯಲಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿದ್ದಾರೆ.
ಪೊಲೀಸ್ ಮಹಾ ನಿರ್ದೇಶಕ ಸ್ಥಾನ ಅಲಂಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಕೊಡಗು ಜಿಲ್ಲೆಗೆ ಆಗಮಿಸಿದ ಪ್ರವೀಣ್ ಸೂದ್, ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು.
ಕೊಡಗು ಪೊಲೀಸ್ ಇಲಾಖೆ ಕೊರೊನಾ ಸಂದರ್ಭ ಕೈಗೊಂಡ ಕಾರ್ಯಗಳು, ಪ್ರಾಕೃತಿಕ ವಿಕೋಪ ಎದುರಾದಾಗ ನಡೆಸಿದ ರಕ್ಷಣಾ ಕಾರ್ಯಾಚರಣೆ ಮತ್ತು ಕಾನೂನು ಸುವ್ಯವಸ್ಥೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಜಿಲ್ಲೆಯಲ್ಲಿ ಮಾದಕ ವಸ್ತುಗಳ ಕಾರ್ಯಾಚರಣೆ ಮತ್ತು ಹತ್ತಿಕ್ಕುವ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರಲ್ಲದೆ, ಜಿಲ್ಲಾ ಪೊಲೀಸ್ ಇಲಾಖೆ ಮೂಲಭೂತವಾಗಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ಮಾಹಿತಿ ಪಡೆದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರವೀಣ್ ಸೂದ್, ರಾಜ್ಯದಲ್ಲಿ ಡ್ರಗ್ಸ್ ದಂಧೆಯನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಕಳೆದ 10 ವರ್ಷಗಳ ಮಾದಕ ವಸ್ತು ಪತ್ತೆ ಪ್ರಕರಣಗಳನ್ನು ಪಟ್ಟಿ ಮಾಡಿದರೆ, ಬೆಂಗಳೂರು ಹೊರತುಪಡಿಸಿದಂತೆ ಕೋಲಾರ, ಗುಲ್ಬರ್ಗ, ಮೈಸೂರು, ರಾಯಚೂರುಗಳಲ್ಲಿಯೂ ಹೆಚ್ಚಿನ ಪ್ರಕರಣಗಳು ಕಂಡು ಬಂದಿದೆ. ರಾಜ್ಯದ ಎಲ್ಲಾ ಭಾಗಗಳಲ್ಲಿಯೂ ಡ್ರಗ್ ದಂಧೆ ಕೋರರ ಸದೆ ಬಡೆಯುವಿಕೆಗೆ ಪೆÇಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ ಎಂದು ಹೇಳಿದರು.
ಡ್ರಗ್ ವಿಚಾರದಲ್ಲಿ ಪೊಲೀಸ್ ಗುಪ್ತಚರ ಇಲಾಖೆ ವಿಫಲವಾಗಿಲ್ಲ ಎಂದು ಸಮರ್ಥಿಸಿಕೊಂಡ ಪ್ರವೀಣ್ ಸೂದ್, ಕ್ರಿಮಿನಲ್ಗಳ ಹತ್ತಿಕ್ಕುವಿಕೆ ಮತ್ತು ಪೊಲೀಸ್ ಕಾರ್ಯಾಚರಣೆ ಒಂದು ನಿರಂತರ ಪ್ರಕ್ರಿಯೆ. ಒಂದೇ ದಿನದಲ್ಲಿ ಇದು ಕೊನೆಯಾಗುವುದಿಲ್ಲ. ಪೊಲೀಸರು ತಪ್ಪು ಮಾಡಿದ ಘಟನೆ ನಡೆದಿದ್ದರೂ ಅವರ ವಿರುದ್ಧ ಕೂಡ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮಾತನಾಡುವ ಹಕ್ಕಿದೆ. ಹೀಗಾಗಿ ಕೆಲವರು ಡ್ರಗ್ಸ್ ವಿಚಾರದಲ್ಲಿ ಪೊಲೀಸ್ ಇಲಾಖೆ ವಿರುದ್ಧ ಆರೋಪ ಮಾಡಿರಬಹುದು ಎಂದು ಹೇಳಿದ ಪ್ರವೀಣ್ ಸೂದ್, ಯಾವ ಇಲಾಖೆ ಬಗ್ಗೆ ಆರೋಪ ಮಾಡಲಾಗಿತ್ತೋ ಇಂದು ಅದೇ ಇಲಾಖೆ ಡ್ರಗ್ ದಂಧೆಯನ್ನು ಮಟ್ಟ ಹಾಕುತ್ತಿದೆ ಎಂದು ಸಮರ್ಥಿಸಿಕೊಂಡರು.
ಚಲನಚಿತ್ರ ನಟ ನಟಿಯರನ್ನು ಮಾತ್ರವೇ ಡ್ರಗ್ ದಂಧೆಯಲ್ಲಿ ಗುರಿ ಮಾಡಲಾಗುತ್ತಿಲ್ಲ. ಎಲ್ಲಾ ಡ್ರಗ್ ಪೂರೈಕೆದಾರರು, ಬಳಕೆದಾರರು ಸೇರಿದಂತೆ ಒಂದು ಅಕ್ರಮ ವ್ಯವಸ್ಥೆಯ ವಿರುದ್ಧ್ದವೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ನುಡಿದರು.
ಸುದ್ದಿಗೋಷ್ಠಿಯಲ್ಲಿ ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕ ವಿಪುಲ್ ಕುಮಾರ್, ಕೊಡಗು ಪೆÇಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಉಪಸ್ಥಿತರಿದ್ದರು.