ಮಡಿಕೇರಿ: ಹಿಂದು ಸಮಾಜದ ಕಾರ್ಯಗಳಿಗೆ ಪುಣ್ಯಕ್ಷೇತ್ರ ತಲಕಾವೇರಿಯ ಅರ್ಚಕರಾಗಿದ್ದ ನಾರಾಯಣ ಆಚಾರ್ಯ ಮತ್ತವರ ಕುಟುಂಬದ ಕೊಡುಗೆ ಅಪಾರ. ಅವರ ಅಕಾಲಿಕ ಮರಣದಿಂದ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ವಿವಿಧ ಸಂಘಟನೆಗಳ ಪ್ರಮುಖರು ಸ್ಮರಿಸಿದರು.
ತಲಕಾವೇರಿಯಲ್ಲಿ ಭೂಕುಸಿತದಿಂದಾಗಿ ಅಗಲಿದ ನಾರಾಯಣ ಆಚಾರ್ಯರ ಕುಟುಂಬಕ್ಕೆ ಸದ್ಗತಿ ಕೋರಿ ಭಾಗಮಂಡಲದ ಕಾಶಿ ಮಠದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಪ್ರಮುಖರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರಲ್ಲದೆ,ಸಮಾಜಕ್ಕೆ ನಾರಾಯಣ ಆಚಾರ್ಯ ಅವರ ಕೊಡುಗೆಯನ್ನು ಸ್ಮರಿಸಿದರು.
ಹಿಂದು ಜಾಗರಣ ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಸಂಘಚಾಲಕ್ ಚಕ್ಕೇರ ಮನು ವೇದಿಕೆಯಲ್ಲಿದ್ದರು.
ಬಿಜೆಪಿ ಮುಖಂಡರಾದ ಎಂ.ಬಿ.ದೇವಯ್ಯ, ಕೋಡಿ ಪೊನ್ನಪ್ಪ, ಡಾ. ಕುಶ್ಯಂತ್ ಕೋಳಿಬೈಲು, ಶಾಸಕ ಕೆ.ಜಿ.ಬೋಪಯ್ಯ ಮುಂತಾದವರು ಮೃತರ ಆತ್ಮಕ್ಕೆ ಶಾಂತಿ ಕೋರಿದರು.
ಸಂಘ ಪರಿವಾರದ ಹಿರಿಯರಾದ ಕೆ.ಕೆ.ಮಹೇಶ್ಕುಮಾರ್, ಕೆ.ಕೆ.ದಿನೇಶ್ಕುಮಾರ್, ಮನು ಮುತ್ತಪ್ಪ, ಹಿಂಜಾವೇ ಮೈಸೂರು ವಿಭಾಗ ಸಂಘಟನಾ ಕಾರ್ಯದರ್ಶಿ ಜೀವನ್, ಕೊಡಗು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಿ.ಬಿ. ಮಹೇಶ್, ನಾರಾಯಣಾಚಾರ್ಯ ಅವರ ಕುಟುಂಬದವರು, ಹಿತೈಷಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ದುರಂತ ಸ್ಥಳಕ್ಕೆ ಭೇಟಿ: ಅತಿವೃಷ್ಟಿಯಲ್ಲಿ ಭೂಕುಸಿತ ಉಂಟಾಗಿ ತಲಕಾವೇರಿಯ ಅರ್ಚಕ ನಾರಾಯಣ ಆಚಾರ್ ಸೇರಿದಂತೆ ಐವರು ಸಾವನ್ನಪ್ಪಿರುವ ತಲಕಾವೇರಿಯ ಬೆಟ್ಟ ಪ್ರದೇಶಕ್ಕೆ ಹಿಂದು ಜಾಗರಣ ವೇದಿಕೆಯ ಮುಖಂಡರಾದ ಜಗದೀಶ್ ಕಾರಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಸಂಘದ ಹಿರಿಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.