ಮೈಸೂರು: ಕೇಂದ್ರ ಸರ್ಕಾರ ಸಿನಿಮಾ ಥಿಯೇಟರ್ಗಳ ಓಪನ್ ಗೆ ಅನುಮತಿ ನೀಡಿರುವುದು ಸಂತಸವಾಗಿದೆ. ಥಿಯೇಟರ್ ಓಪನ್ ಆಗೋದು ತುಂಬಾ ಖುಷಿ ವಿಚಾರ. ಆದರೆ ಎಷ್ಟು ಜನ ಬರಬೇಕು ಎಂದು ನಟನಾಗಿ ನಾನು ಏನು ಹೇಳೋಕಾಗೋಲ್ಲ ಎಂದು ಚಿತ್ರ ನಟ ಶಿವರಾಜ್ಕುಮಾರ್ ಹೇಳಿದರು.
ಗುರುವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಟನಾಗಿ ನಾನು ಶೂಟಿಂಗ್ ಮಾಡಬಹುದು, ಆಕ್ಟಿಂಗ್ ಮಾಡಬಹುದು. ಚಿತ್ರ ಪ್ರದರ್ಶನ ಹಾಗೂ ಬಿಡುಗಡೆ ಬಗ್ಗೆ ನಾನೇನು ಹೇಳೋಲ್ಲ. ಅದಕ್ಕೆ ಅಂತ ನಿರ್ಮಾಪಕರಿದ್ದಾರೆ, ಅವರೇ ತೀರ್ಮಾನ ಮಾಡ್ತಾರೆ. ನಾನು ಪ್ರೇಕ್ಷಕರಿಗೆ ಸಿನಿಮಾ ನೋಡಲು ಬನ್ನಿ ಅಂತ ಕರೆಯುತ್ತೇನೆ. ಆದರೆ ಯಾರಿಗೂ ಒತ್ತಾಯ ಮಾಡಿ, ರಿಸ್ಕ್ ತೆಗೆದುಕೊಂಡು ಸಿನಿಮಾ ನೋಡಿ ಅಂತ ಹೇಳೋಲ್ಲ ಎಂದರು.
ಸಿನಿಮಾ ಸಹ ಒಂದು ಉದ್ಯಮ. ಎಲ್ಲಾ ಉದ್ಯಮದಂತೆ ಇದು ಸಹ ನಿಧಾನವಾಗಿ ಮೇಲೇಳಬೇಕು. ಯಾವ ಸಿನಿಮಾ ಬರಬೇಕು ಅಂತಾನು ನಾನು ಹೇಳೋಲ್ಲ. ಎಲ್ಲಾ ಸಿನಿಮಾಗಳು ಒಂದೇ. ಅದೊಂದು ಮ್ಯಾಜಿಕ್ ರೀತಿ ಇರುತ್ತೆ, ಯಾವ ಸಿನಿಮಾ ಬೇಕಾದರೂ ಗೆಲ್ಲಬಹುದು. ಆದರೆ, ಜನರು ತಮ್ಮ ಸುರಕ್ಷತೆ ನೋಡಿಕೊಂಡು ಥಿಯೇಟರ್ ಗೆ ಬರಲಿ. ಥಿಯೇಟರ್ ನಲ್ಲಿ ಏನೇ ಸಮಸ್ಯೆ ಇದ್ದರೂ ನೇರವಾಗಿ ಹೇಳಲಿ. ಪ್ರೇಕ್ಷಕರ ಸುರಕ್ಷತೆ ನಮಗೆ ಬಹಳಾ ಮುಖ್ಯ ಎಂದು ತಿಳಿಸಿದರು.
ಚಿತ್ರರಂಗಕ್ಕೆ ಸರ್ಕಾರ ನೆರವಾಗುವ ನಿರೀಕ್ಷೆ ಇದೆ: ಲಾಕ್ಡೌನ್ನಿಂದ ಚಿತ್ರರಂಗಕ್ಕೆ ಸಂಕಷ್ಟ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಚಿತ್ರರಂಗಕ್ಕೆ ನೆರವಾಗುವ ಭರವಸೆ ನೀಡಿದ್ದಾರೆ. ಅವರ ಭರವಸೆಯ ನಿರೀಕ್ಷೆಯಲ್ಲೆ ಇದ್ಧೇವೆ. ನಮಗೆ ಅವರಿಂದ ಉತ್ತಮ ಸ್ಪಂದನೆ ಸಿಗುವ ಸಾಧ್ಯತೆ ಇದೆ. ಸರ್ಕಾರಕ್ಕೆ ನಾವು ಒತ್ತಾಯ ಮಾಡಬಾರದು. ಅವರು ಸಹ ಕಷ್ಟದಲ್ಲಿದ್ದಾರೆ. ಸರ್ಕಾರ ಎಲ್ಲವನ್ನು ನಿಭಾಯಿಸಬೇಕು. ಹಾಗಾಗಿ ಅವರಿಗೂ ಸಮಯ ಬೇಕಾಗುತ್ತೆ. ಸಿಎಂ ಮಾತಿನ ಮೇಲೆ ಭರವಸೆ ಇದೆ. ಚಿತ್ರರಂಗಕ್ಕೆ ಸರ್ಕಾರ ನೆರವಾಗುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.