ದಾವಣಗೆರೆ: ಕಳೆದೆರೆಡು ದಿನಗಳಿಂದ ಶತಕ ದಾಟಿ ಬರುತ್ತಿದ್ದ ಕೊರೋನಾ ಪಾಸಿಟಿವ್ ಸಂಖ್ಯೆ ಬುಧವಾರ ಒಂದೇ ದಿನಕ್ಕೆ ದ್ವಿಶತಕ ಮೀರಿದೆ. 224 ಹೊಸ ಪ್ರಕರಣ ಪತ್ತೆಯಾಗಿದ್ದು, ಮಹಾಮಾರಿಗೆ ಮತ್ತೆ 4 ಮಂದಿ ಬಲಿಯಾಗಿದ್ದಾರೆ.
ದಾವಣಗೆರೆಯ 60 ವರ್ಷದ ವೃದ್ಧೆ, ವಿನೋಬ ನಗರದ 72 ವರ್ಷದ ವೃದ್ಧ, ನಿಟುವಳ್ಳಿ ಲೆನಿನ್ ನಗರದ 62 ವರ್ಷದ ವೃದ್ಧ, ಹರಿಹರದ 68 ವರ್ಷದ ವೃದ್ಧೆ ಕಳೆದೊಂದು ವಾರದಲ್ಲಿ ಮೃತಪಟ್ಟಿದ್ದು, ಇವರಿಗೆ ಕೊರೋನಾ ಇರುವುದು ಬುಧವಾರದ ವರದಿಯಲ್ಲಿ ದೃಢಪಟ್ಟಿದೆ.
ಹೊಸ ಪ್ರಕರಣಗಳಲ್ಲಿ ದಾವಣಗೆರೆ ತಾಲೂಕೊಂದರಲ್ಲೇ 152, ಹರಿಹರ 26, ಹೊನ್ನಾಳಿ 22, ಚನ್ನಗಿರಿ 12 ಮತ್ತು ಜಗಳೂರು ತಾಲೂಕು ಹಾಗೂ ಹೊರಜಿಲ್ಲೆಯ ತಲಾ 6 ಮಂದಿಗೆ ಸೋಂಕು ತಗುಲಿದೆ. ಸೋಂಕಿತರಲ್ಲಿ ದಾವಣಗೆರೆ ಜಿಲ್ಲಾ ಪಂಚಾಯತ್ ಕ್ಯಾಂಟೀನ್, ಬಾಪೂಜಿ ಆಸ್ಪತ್ರೆ, ಕೃಷಿ ಇಲಾಖೆ ಕಚೇರಿ, ಪೊಲೀಸ್ ಇಲಾಖೆ, ಕೆಎಸ್ಸಾರ್ಟಿಿಸಿ ಹಾಗೂ ಯಾತ್ರಿ ಕಂಫರ್ಟ್ಸ್ ಸಿಬ್ಬಂದಿ ಸೇರಿದ್ದಾರೆ.
ದಾವಣಗೆರೆಯ 12, ಹರಿಹರ ತಾಲೂಕಿನ 6 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ 1891 ಪಾಸಿಟಿವ್ ಪ್ರಕರಣ ವರದಿಯಾಗಿದ್ದು, 981 ಮಂದಿ ಗುಣಮುಖರಾಗಿದ್ದಾರೆ. 45 ಸಾವು ಸಂಭವಿಸಿದ್ದು, ಸದ್ಯ ಜಿಲ್ಲೆಯಲ್ಲಿ 865 ಸಕ್ರಿಯ ಪ್ರಕರಣಗಳಿವೆ.