ದಾವಣಗೆರೆ: ಜಿಲ್ಲೆಯಲ್ಲಿ ಶುಕ್ರವಾರ ಕೊರೋನಾ ಅಟ್ಟಹಾಸ ಮುಂದುವರೆದಿದ್ದು, ಮಹಾಮಾರಿಗೆ ಇಬ್ಬರು ಬಲಿಯಾಗಿದ್ದಾರೆ. ಹೊನ್ನಾಳಿ ಕೆಎಸ್ಸಾರ್ಟಿುಸಿ ಸಿಬ್ಬಂದಿ, ಮಲೇಬೆನ್ನೂರು ಪೊಲೀಸ್ ಸಿಬ್ಬಂದಿ ಸಹಿತ 31 ಜನರಿಗೆ ಹೊಸದಾಗಿ ಸೋಂಕು ತಗುಲಿದ್ದು, 50 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಜಿಲ್ಲೆಯ ಹರಿಹರ ತಾಲೂಕು ಮಲೇಬೆನ್ನೂರು ಇಂದಿರಾ ನಗರದ 43 ವರ್ಷದ ಮಹಿಳೆ, ದಾವಣಗೆರೆ ದೇವರಾಜ ಅರಸು ಬಡಾವಣೆಯ 62 ವರ್ಷದ ವೃದ್ಧ ಮೃತಪಟ್ಟಿದ್ದು, ಇವರಿಗೆ ಕೊರೋನಾ ಸೋಂಕು ಇದ್ದುದು ವರದಿಯಲ್ಲಿ ದೃಢಪಟ್ಟಿದೆ.
ದಾವಣಗೆರೆ ತಾಲೂಕಿನಲ್ಲಿ 17, ಹರಿಹರ 7, ಜಗಳೂರು 5 ಮತ್ತು ಚನ್ನಗಿರಿ, ಹೊನ್ನಾಳಿಯಲ್ಲಿ ತಲಾ 1 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಸೋಂಕಿತರಲ್ಲಿ 14 ಪುರುಷರು, 17 ಮಹಿಳೆಯರು. 50 ವರ್ಷ ಮೇಲ್ಪಟ್ಟ 6 ಜನರಿಗೆ ಸೋಂಕು ದೃಢಟ್ಟಿದೆ.
ದಾವಣಗೆರೆ ತಾಲೂಕಿನ 14, ಹರಿಹರ 5, ಜಗಳೂರು 21, ಹೊನ್ನಾಳಿ 9 ಹಾಗೂ ಚನ್ನಗಿರಿಯ 1 ವ್ಯಕ್ತಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಬಿಡುಗಡೆಯಾದವರಲ್ಲಿ 27 ಮಹಿಳೆಯರು, 23 ಪುರುಷರು. ಈವರೆಗೆ ಜಿಲ್ಲೆಯಲ್ಲಿ 689 ಪಾಸಿಟಿವ್ ಪ್ರಕರಣ ವರದಿಯಾಗಿದ್ದು, 544 ಮಂದಿ ಬಿಡುಗಡೆಯಾಗಿದ್ದಾರೆ. 24 ಸಾವು ಸಂಭವಿಸಿದ್ದು, ಸದ್ಯ ಜಿಲ್ಲೆಯಲ್ಲಿ 121 ಸಕ್ರಿಯ ಪ್ರಕರಣಗಳಿವೆ.