ದಾವಣಗೆರೆ: ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ 4 ಮಂದಿ ಬಲಿಯಾಗಿದ್ದು, 108 ಹೊಸ ಪ್ರಕರಣ ವರದಿಯಾಗಿವೆ. ಇದೇ ವೇಳೆ 188 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕಳೆದ ಮೂರು ದಿನಗಳಲ್ಲಿ ದಾವಣಗೆರೆ ಜಾಲಿನಗರದ 80 ವರ್ಷದ ವೃದ್ಧೆ, ಕೆಟಿಜೆ ನಗರದ 63 ವರ್ಷದ ವೃದ್ಧ, ಬಸವರಾಜಪೇಟೆಯ 59 ವರ್ಷದ ಪುರುಷ, ಚನ್ನಗಿರಿ ಪಿಡಬ್ಲ್ಯೂಡಿ ರಸ್ತೆಯ 55 ವರ್ಷದ ಮಹಿಳೆ ಮೃತಪಟ್ಟಿದ್ದು, ಇವರಿಗೆ ಕೊರೋನಾ ಇರುವುದು ಶನಿವಾರದ ವರದಿಯಲ್ಲಿ ದೃಢಪಟ್ಟಿದೆ.
ಹೊಸ ಪ್ರಕರಣಗಳಲ್ಲಿ ದಾವಣಗೆರೆ ತಾಲೂಕಿನಲ್ಲಿ 73, ಹರಿಹರ 12, ಜಗಳೂರು 8, ಹೊನ್ನಾಳಿ 7, ಚನ್ನಗಿರಿ 6 ಹಾಗೂ ಹೊರಜಿಲ್ಲೆಯ 2 ವ್ಯಕ್ತಿಗಳಿಗೆ ಸೋಂಕು ತಗುಲಿದೆ. ಸೋಂಕಿತರಲ್ಲಿ ದಾವಣಗೆರೆ ಜಿಲ್ಲಾಸ್ಪತ್ರೆ, ಬಾಪೂಜಿ ಆಸ್ಪತ್ರೆ, ಚನ್ನಗಿರಿಯ ತುಮ್ಕೋಸ್ ಸಿಬ್ಬಂದಿ ಸೇರಿದ್ದಾರೆ.
ದಾವಣಗೆರೆ ತಾಲೂಕಿನ 107, ಹರಿಹರ 28, ಜಗಳೂರು 17, ಚನ್ನಗಿರಿ 15, ಹೊನ್ನಾಳಿ 12 ಮತ್ತು ಹೊರಜಿಲ್ಲೆಯ 9 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ 2206 ಪಾಸಿಟಿವ್ ಪ್ರಕರಣ ವರದಿಯಾಗಿದ್ದು, 1390 ಮಂದಿ ಗುಣಮುಖರಾಗಿದ್ದಾರೆ. 52 ಸಾವು ಸಂಭವಿಸಿದ್ದು, ಸದ್ಯ ಜಿಲ್ಲೆಯಲ್ಲಿ 764 ಸಕ್ರಿಯ ಪ್ರಕರಣಗಳಿವೆ.