ಕೋಲಾರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದ ನಮ್ಮ ಊರು ನಮ್ಮ ಕೆರೆ ಯೋಜನೆಯಡಿ ಪುನಶ್ಚೇತನಗೊಂಡಿರುವ ತಾಲ್ಲೂಕಿನ ಸುಗಟೂರಿನ ರಾಮಯ್ಯ ಕೆರೆ ಇದೀಗ ನೀರು ತುಂಬಿ ಕೋಡಿ ಹೋಗುತ್ತಿರುವುದನ್ನು ಯೋಜನೆ ಜಿಲ್ಲಾ ನಿರ್ದೇಶಕ ಜೆ.ಚಂದ್ರಶೇಖರ್ ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಜಿಲ್ಲೆಯ ಅನೇಕ ಕೆರೆಗಳನ್ನು ಹೂಳೆತ್ತಿ ಪುನಶ್ಚೇತನಗೊಳಿಸಿದ್ದು, ಈ ಸಾಲಿಗೆ ಇದೀಗ ಸುಗಟೂರಿನ ರಾಮಯ್ಯ ಕೆರೆಯೂ ಸೇರ್ಪಡೆಯಾಯಿತು.
ಈ ಕಾರ್ಯಕ್ರಮದಡಿಯಲ್ಲಿ ೨೦೧೯-೨೦ನೇ ಸಾಲಿನಲ್ಲಿ ಕೋಲಾರ ತಾಲ್ಲೂಕಿನ ಸುಗಟೂರು ಗ್ರಾಮದ ರಾಮಯ್ಯನ ಕೆರೆ ಹೂಳೆತ್ತುವ ಹಾಗೂ ಕೆರೆ ಪುನಶ್ಚೇತನವನ್ನು ಸುಮಾರು ೧೦ಲಕ್ಷ ವೆಚ್ಚದಲ್ಲಿ ೨೩ ಎಕರೆ ವಿಸ್ತೀರ್ಣವಿರುವ ರಾಮಯ್ಯನ ಕೆರೆ ಅಭಿವೃದ್ಧಿ ಕಾರ್ಯಕ್ರಮವನ್ನು ಕೈಗೊಳ್ಳಲಾಗಿತ್ತು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಹಭಾಗಿತ್ವದಲ್ಲಿ ಸುಗಟೂರು ಗ್ರಾಮದಲ್ಲಿ ಕೆರೆ ಅಭಿವೃದ್ಧಿ ಸಮಿತಿ ರಚನೆ ಮಾಡಿ ಹಾಗೂ ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ಹಾಗೂ ಊರಿನ ಮುಖಂಡರು ಗ್ರಾಮಸ್ಥರ ಸಹಕಾರದಿಂದ ಕೆರೆಯಲ್ಲಿ ಹೂಳೆತ್ತುವ ಕಾರ್ಯ ನಡೆಸಲಾಗಿತ್ತು.
ಸದರಿ ಕೆರೆಯು ಪ್ರಸ್ತುತ ವರ್ಷದಲ್ಲಾದ ಮಳೆಯಿಂದಾಗಿ ಹಾಗೂ ಕೆ.ಸಿ ವ್ಯಾಲಿ ನೀರು ಅಗ್ರಹಾರ ಕೆರೆಯಿಂದ ಬಂದು ಕೆರೆಗೆ ಸೇರಿರುವುದರಿಂದ ಈಗ ಕೆರೆಯು ತುಂಬಿ ಕೋಡಿ ಹರಿಯುತ್ತಿದೆ.
ಕೆರೆಗೆ ಕೆರೆ ಉಸ್ತುವಾರಿ ಸಮಿತಿ ಅಧ್ಯಕ್ಷರೊಂದಿಗೆ ಭೇಟಿ ನೀಡಿದ್ದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಜೆ.ಚಂದ್ರಶೇಖರ್, ಈಗಾಗಲೇ ಜಿಲ್ಲೆಯ ಅನೇಕ ಕೆರೆಗಳನ್ನು ಪುನಶ್ಚೇತನಗೊಳಿಸಲಾಗಿದೆ, ಕಳೆದ ಮೂರುವರ್ಷಗಳ ಹಿಂದೆ ಅರಾಭಿಕೊತ್ತನೂರು ಕೆರೆಯ ಹೂಳು ತೆಗೆದ ನಂತರ ಆ ಕೆರೆಯೂ ಭರ್ತಿಯಾಗಿದೆ ಎಂದರು.
ಯಾವುದೇ ಶಾಶ್ವತ ನದಿ ಮೂಲಗಳಿಲ್ಲದ ಕೋಲಾರ ಜಿಲ್ಲೆಗೆ ಕೆರೆಗಳೇ ಜೀವಾಳವಾಗಿವೆ, ಇಂತಹ ಪ್ರಕೃತಿದತ್ತವಾದ ಕೆರೆಗಳನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಕೋಲಾರ ಜಿಲ್ಲೆಯ ಕೆರೆಗಳ ಪುನಶ್ಚೇತನಕ್ಕೆ ನೆರವಾಗುತ್ತಿದ್ದಾರೆ ಎಂದರು.
ಕೆರೆ ಅಭಿವೃದ್ದಿ ಸಮಿತಿ ಅಧ್ಯಕ್ಷ ನಾರಾಯಣಗೌಡ, ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಅನೇಕ ಸಾಮಾಜಿಕ ಕಾರ್ಯಗಳನ್ನು ನಡೆಸಿಕೊಂಡು ಬಂದಿದೆ, ಅನೇಕ ಗ್ರಾಮಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳ ಸ್ಥಾಪನೆ, ಅನಾಥ,ಅಸಹಾಯಕರಿಗೆ ಮಾಸಿಕ ವೇತನದಂತಹ ಅನೇಕ ಜನಪರ ಕೆಲಸ ಮಾಡುತ್ತಿದೆ ಎಂದರು.
ಪೂಜ್ಯ ಹೆಗಡೆಯವರು ಕೋಲಾರ ಜಿಲ್ಲೆಯ ಬಗ್ಗೆ ಕನಿಕರ ತೋರಿದ್ದು, ನಮ್ಮೂರಿನ ಕೆರೆ ಪುನಶ್ಚೇತನಗೊಳಿಸಿದ್ದಾರೆ, ಇದರಿಂದ ಇಂದು ಕೆರೆ ತುಂಬಿ ನೀರಿನಿಂದ ಕಂಗೊಳಿಸುತ್ತಿದೆ, ರೈತರ ಬದುಕು ಹಸನಾಗುವ ಮುನ್ಸೂಚನೆ ನೀಡಿದ್ದ, ಪೂಜ್ಯರಿಗೆ ಗ್ರಾಮದ ಜನರು ಚಿರಋಣಿಗಳು ಎಂದರು.
ಈ ಕೆರೆ ತುಂಬಿ ೧೬ ವರ್ಷವಾಗಿತ್ತು, ಇದೀಗ ಪುನಶ್ಚೇತನದ ನಂತರ ಮಂಜುನಾಥಸ್ವಾಮಿಯ ಕೃಪೆಯಿಂದ ತುಂಬಿದ್ದು, ಈ ಭಾಗದ ೭೦ಕ್ಕೂ ಹೆಚ್ಚು ಕೊಳವೆ ಬಾವಿಗಳು ಮರುಭರ್ತಿಯಾಗಿವೆ ಎಂದರು.
ತಾಲ್ಲೂಕು ಯೋಜನಾಧಿಕಾರಿಗಳಾದ ಎಸ್.ಚಂದ್ರಶೇಖರ್, ಕೆರೆ ತುಂಬಿರುವುದರಿಂದ ಕೊಳವೆ ಬಾವಿಗಳಲ್ಲಿ ನೀರು ಬರುತ್ತಿದೆ, ಇದರಿಂದ ಈ ಭಾಗದ ರೈತರಿಗೆ ಕೃಷಿ ಕೆಲಸಗಳಿಗೆ ತುಂಬಾ ಅನುಕೂಲವಾಗಿದ್ದು,ಕೆರೆಯನ್ನು ಉಳಿಸಿಕೊಳ್ಳುವ ಹಾದಿಯಲ್ಲಿ ಗ್ರಾಮಸ್ಥರು ಕೈಜೋಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಧರ್ಮಸ್ಥಳ ಯೋಜನೆಯ ವಲಯದ ಮೇಲ್ವಿಚಾರಕ ಎಸ್.ರಾಜೇಶ್, ಚಿಟ್ನಹಳ್ಳಿಯ ಸಿ.ಬಿ.ಆನಂದ್ ಮತ್ತಿತರರು ಹಾಜರಿದ್ದರು.