ಧಾರವಾಡ: ಒಂದೂವರೆ ತಿಂಗಳಿನಿ0ದ ಪಾಲಕರನ್ನು ಸೇರಲಾಗದೇ, ಹುಬ್ಬಳ್ಳಿ ಮರಾಠಗಲ್ಲಿಯ ಕೋಳಿಪೇಟೆಯ ಪರಿಚಯದವರೊಬ್ಬರ ಮನೆಯಲ್ಲಿ ಆಶ್ರಯ ಪಡೆದಿದ್ದ ರಾಜಸ್ಥಾನದ ಇಬ್ಬರು ಅಪ್ರಾಪ್ತ ವಯಸ್ಸಿನ ಮಕ್ಕಳು, ಅವರ ಪಾಲಕರನ್ನು ಸೇರಲು ಜಿಲ್ಲಾಧಿಕಾರಿ ದೀಪಾ ಚೋಳನ್ ನೆರವಿನ ಹಸ್ತ ಚಾಚಿದ್ದಾರೆ. ರಾಜಸ್ಥಾನ ಸರ್ಕಾರದ ಅಧಿಕಾರಿಗಳಿಗೆ ಅಧಿಕೃತವಾಗಿ ಮಾಹಿತಿ ನೀಡಿ, ಅಗತ್ಯ ವಾಹನ ಪಾಸ್ ಒದಗಿಸಿದ್ದಾರೆ.
ಸುಮಾರು ಐವತ್ತು ದಿನಗಳ ಹಿಂದೆ ತಾಲಸಾರಾಮ್ ದಂಪತಿಗಳು ರಾಜಸ್ಥಾನದ ಸಿರೋಹಿ ಜಿಲ್ಲೆಯ ತಮ್ಮ ಸ್ವಗ್ರಾಮ ಮೆಮಂಡ್ವಾರಾಕ್ಕೆ ಅನಿವಾರ್ಯ ಕಾರಣಗಳಿಂದ ತೆರಳಿದ್ದರು. ಹಣಕಾಸಿನ ಮುಗ್ಗಟ್ಟಿನಿಂದಾಗಿ ಮಕ್ಕಳನ್ನು ಕರೆದುಕೊಂಡು ಹೋಗಲು ಸಾಧ್ಯವಾಗದೇ ತಾವು ಬಾಡಿಗೆ ಇರುವ ಮನೆಯ ಮಾಲೀಕರ ಬಳಿಗೆ ಮಕ್ಕಳನ್ನು ಒಪ್ಪಿಸಿ ತೆರಳಿದ್ದರು. ಅಷ್ಟರಲ್ಲಿಯೇ ಲಾಕ್ಡೌನ್ ಆಗಿ ಮಕ್ಕಳು ಇಲ್ಲಿಯೇ ಉಳಿದ್ದಾರೆ.
ತಾಲಸಾರಾಮ್ ದಂಪತಿಗೆ ಲಾಕ್ಡೌನ್ನಿಂದ ಮರಳಿ ಹುಬ್ಬಳಿಗೆ ಬರಲು ಸಾಧ್ಯವಾಗಿರಲಿಲ್ಲ. ೧೦ ವರ್ಷದ ಬಾಲಕಿ ರೋಮುಕುಮಾರಿ ಹಾಗೂ ೮ ವರ್ಷದ ಪೋಸುಕುಮಾರಿ ತಮ್ಮ ಪಾಲಕರನ್ನು ಸೇರಲು ಹಪಹಪಿಸುತ್ತಿರುವ ಕುರಿತು ಖಾಸಗಿ ವ್ಯಕ್ತಿಯೊಬ್ಬರು ಟ್ವೀಟ್ ಮಾಡಿದ್ದನ್ನು ಗಮನಿಸಿದ ಹುಬ್ಬಳ್ಳಿ ಶಹರ ತಹಸೀಲ್ದಾರ್ ಶಶಿಧರ ಮಾಡ್ಯಾಳ ಅವರು ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಸಿಬ್ಬ0ದಿ ಮೂಲಕ ಖುದ್ದು ಪರಿಶೀಲಿಸಿ ವರದಿ ತರಿಸಿಕೊಂಡರು. ಮಕ್ಕಳನ್ನು ತಮ್ಮ ಬಳಿ ಇರಿಸಿಕೊಂಡಿದ್ದ ರಮೇಶ್ ರಾವಲ್ ಅವರು ಸ್ವತಃ ತಮ್ಮ ಕಾರಿನ ಮೂಲಕ ಮಕ್ಕಳನ್ನು ರಾಜಸ್ಥಾನಕ್ಕೆ ಬಿಟ್ಟು ಬರಲು ಮುಂದೆ ಬಂದಾಗ ತಹಸೀಲ್ದಾರರು ಮುತುವರ್ಜಿ ವಹಿಸಿ ಅಗತ್ಯ ಪರವಾನಗಿಯ ಏರ್ಪಾಡು ಮಾಡಿದರು. ಮಾರ್ಗಮಧ್ಯೆ ಆಹಾರ, ಸೂರತ್ನಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲು ಅಲ್ಲಿನ ಅಧಿಕಾರಿಗೆ ಮಾಹಿತಿ ನೀಡಿದ್ದಾರೆ.
ಗುರುವಾರ ಬೆಳಿಗ್ಗೆ ತಮ್ಮ ಕಚೇರಿ ಆವರಣದಲ್ಲಿ ಮಕ್ಕಳಿಗೆ ಶುಭ ಹಾರೈಸಿ ಬೀಳ್ಕೊಟ್ಟ ಜಿಲ್ಲಾಧಿಕಾರಿ ದೀಪಾ ಚೋಳನ್, ಮಕ್ಕಳ ಶಿಕ್ಷಣದ ಬಗ್ಗೆ ಮಾಹಿತಿ ಪಡೆದು ಉತ್ತಮ ಅಭ್ಯಾಸ ಮಾಡಲು ತಿಳಿಸಿ, ಮಕ್ಕಳನ್ನು ಸುರಕ್ಷಿತವಾಗಿ ಪಾಲಕರಿಗೆ ಒಪ್ಪಿಸಿ ತಹಸೀಲ್ದಾರರಿಗೆ ವರದಿ ನೀಡಲು ಕರೆದೊಯ್ಯುತ್ತಿರುವ ವ್ಯಕ್ತಿಗಳಿಗೆ ಸೂಚಿಸಿದರು.
ಜಿಪಂ ಸಿಇಓ ಡಾ.ಬಿ.ಸಿ.ಸತೀಶ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಸುಜಾತಾ ಹಸವಿಮಠ, ಹುಬ್ಬಳ್ಳಿ ತಹಸೀಲ್ದಾರ್ ಶಶಿಧರ ಮಾಡ್ಯಾಳ, ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್ ಪ್ರಕಾಶ ನಾಶಿ, ಕೆ.ಎ.ಜಂಗೂರ್ ಮಕ್ಕಳನ್ನು ಬೀಳ್ಕೊಟ್ಟರು.