ಧಾರವಾಡ: ಜಿಲ್ಲೆಯ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢಶಾಲೆಗಳು ಕಳೆದ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳಿಂದ ಭರಿಸಿಕೊಂಡ ಭೋಧನಾ ಶುಲ್ಕದಷ್ಟೇ ಪ್ರಸಕ್ತವೂ ಭರಿಸಿಕೊಳ್ಳಲು ಸರ್ಕಾರ ಆದೇಶಿಸಿದೆ. ಅದರಂತೆ ಯಾವುದೇ ಶಾಲೆಗಳು ಶುಲ್ಕ ಹೆಚ್ಚಿಸದಂತೆ, ಹಿಂದಿನ ವರ್ಷದಷ್ಟೇ ಭೋಧನಾ ಶುಲ್ಕ ಪಡೆಯಲು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ನೂತನ ಸಭಾಂಗಣದಲ್ಲಿ ಶುಕ್ರವಾರ ನಡೆದ ಡೆರಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು, ವಿವಿಧ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ವಿದ್ಯಾರ್ಥಿ ಪೋಷಕ-ಪಾಲಕರ ಸಂಘಗಳ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಸಕ್ತ ಕೊರೋನಾ ಸಂಕಷ್ಟದಲ್ಲಿ ಯಾವುದೇ ಶಾಲೆಗಳು ಶುಲ್ಕ ಹೆಚ್ಚಿಸದಂತೆ ಆದೇಶಿಸಿದರು.
ವಿವಿಧ ಶಾಲೆಗಳು 2020-21ನೇ ಸಾಲಿಗೆ ವಿದ್ಯಾರ್ಥಿಗಳ ಪ್ರವೇಶ, ಭೋಧನಾ ಶುಲ್ಕ ಸೇರಿದಂತೆ ಇತರೆ ವಿಭಾಗಗಳಡಿ ಹೆಚ್ಚುವರಿ ಶುಲ್ಕ ಪಾಲಕರಿಂದ ಭರಿಸಿಕೊಳ್ಳುವ ದೂರುಗಳು ಡೆರಾ ಸಮಿತಿಗೆ ಬಂದಿವೆ. ಕೊರೊನಾ ಹಿನ್ನೆಲೆ ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಂದ ಪ್ರಸಕ್ತ ಸಾಲಿಗೆ ಹೆಚ್ಚುವರಿ ಶುಲ್ಕಗಳನ್ನು ವಸೂಲಿ ಮಾಡದೇ ಕಳೆದ ಸಾಲಿನ ಶುಲ್ಕದಷ್ಟೆ ಭರಿಸಿಕೊಳ್ಳಲು ನಿರ್ದೇಶಿಸಿದೆ ಎಂದು ಹೇಳಿದರು.
ಶಿಕ್ಷಣ ಇಲಾಖೆಯ ನಿರ್ದೇಶನದಂತೆ 2020-21ನೇ ಸಾಲಿನಲ್ಲಿ ಪಡೆಯುವ ಶುಲ್ಕವನ್ನು ಇಲಾಖಾ ವೆಬ್ಸೈಟ್ನಲ್ಲಿ ಪ್ರಕಟಿಸಲು ಹಾಗೂ ಸರ್ಕಾರದ ಆದೇಶದಂತೆ ಖಾಸಗಿ, ಅನುದಾನ ರಹಿತ ಶಾಲೆಗಳು ಯಾವುದೇ ಭೋಧನಾ ಶುಲ್ಕವನ್ನು ಹೆಚ್ಚಿಸಬಾರದು. ಶಾಲಾ ಆಡಳಿತ ಮಂಡಳಿ ಹಾಗೂ ಮುಖ್ಯಸ್ಥರು ಆದೇಶವನ್ನು ಪಾಲಿಸಬೇಕು. ದೂರುಗಳು ಬಂದಲ್ಲಿ ಸೂಕ್ತ ಕ್ರಮ ಜರಿಗಿಸುವುದಾಗಿ ಎಚ್ಚರಿಸಿದರು.
ಜಿಲ್ಲೆಯ ಖಾಸಗಿ ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಸರ್ಕಾರದ ಆದೇಶದಂತೆ ಸೇವಾ ಭದ್ರತೆ, ಕನಿಷ್ಠ ಮೂಲ ವೇತನ ನೀಡುವಂತೆ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳಿಗೆ ಸೂಚಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎಲ್.ಹoಚಾಟಿ ವಿವಿಧ ಶಾಲೆಗಳ ಶುಲ್ಕ, ಸೇವಾ ಭದ್ರತೆ ಕುರಿತು ಸ್ವೀಕೃತಗೊಂಡ ದೂರುಗಳನ್ನು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸೇಂಟ್ ಅಂಥೋನಿ ಪಬ್ಲಿಕ ಶಾಲೆ ಆಡಳಿತ ಮಂಡಳಿ, ಮಿತ್ರ ಶಿಕ್ಷಣ ಸಂಸ್ಥೆಯ ಪ್ರತಿನಿಧಿ, ಬಾಸೆಲ್ ಮಿಷನ್ ಶಿಕ್ಷಣ ಸಂಸ್ಥೆಯ ಪ್ರತಿನಿಧಿ, ದೂರುದಾರರಾದ ರಂಗರೆಡ್ಡಿ, ರಂಜನ್ ಇದ್ದರು.
ಶಾಲೆಗೆ ನೋಟಿಸ್ ಜಾರಿ
ಧಾರವಾಡದ ಬಾಸೆಲ್ ಮಿಷನ್ ಹೈಯರ್ ಎಜ್ಯಕೇಷನ್ ಸೆಂಟರ್ನ ಅಧ್ಯಕ್ಷರು ಹಾಗೂ ಮಿತ್ರ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಸಭೆಗೆ ಹಾಜರಿರದೇ ಸೂಕ್ತ ಮಾಹಿತಿ ನೀಡದ ಹಿನ್ನಲೆ ಕಾರಣ ಕೇಳಿ ನೋಟಿಸ್ ನೀಡಿ, ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸದರಿ ಸಂಸ್ಥೆಗಳ, ಶಾಲೆಗಳ ಪ್ರಸಕ್ತ 2020-21ನೇ ಸಾಲಿನ ಮಾನ್ಯತೆ ರದ್ದುಪಡಿಸುವಂತೆ ಆದೇಶಿಸಿದರು.