ಧಾರವಾಡ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮತ್ತೊಂದು ಕೋವಿಡ್-19 ಪಾಸಿಟಿವ್ ಪ್ರಕರಣ ದೃಢಪಟ್ಟಿದ್ದು, ಇವರು ಪಿ.236ರೊಂದಿಗೆ ದ್ವಿತೀಯ ಸಂಪರ್ಕ ಹೊಂದಿದ್ದ ಹುಬ್ಬಳ್ಳಿ ಕರಾಡಿ ಓಣಿಯ ವ್ಯಕ್ತಿ.
ಹುಬ್ಬಳ್ಳಿ 44ನೇ ವಾರ್ಡಿನ ನಿವಾಸಿಯಾದ ಈ ವ್ಯಕ್ತಿಯು ತೊರವಿಗಲ್ಲಿಯ ಖಬರಸ್ಥಾನದ (ಸ್ಮಶಾನ) ಕಾವಲುಗಾರ ಎಂಬುದು ಪರಿಶೀಲನೆ ವೇಳೆ ದೃಢಪಟ್ಟಿದೆ. ಇವರಿಗೆ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅಲ್ಲದೇ ಸೋಂಕಿತ ಪಿ.236 ಹಾಗೂ ಇತರರೊಂದಿಗೆ ಮಾ.27ರಂದು ಮುಲ್ಲಾ ಓಣಿಯ ಡಾಕಪ್ಪ ಸರ್ಕಲ್ ದಿಂದ ಕಾಳಮ್ಮನ ಅಗಸಿವರೆಗೆ, ಕಮರಿಪೇಟೆ, ಆನಂದನಗರದ ಸಾರ್ವಜನಿಕರಿಗೆ ಉಚಿತ ಆಹಾರ ಧಾನ್ಯ ವಿತರಿಸಿರುವುದು ಪರಿಶೀಲನೆ ವೇಳೆ ದೃಢಪಟ್ಟಿರುತ್ತದೆ.
ಪಿ.363 ಅವರನ್ನು ಸಂಪರ್ಕಿಸಿದ, ಆಹಾರ ಧಾನ್ಯ ಪಡೆದ ಜನರಿಗೆ ಸೋಂಕು ತಗಲುವ ಸಾಧ್ಯತೆ ಇದ್ದು, ಆ ಎಲ್ಲ ವ್ಯಕ್ತಿಗಳು ಮತ್ತು ಮಾ.20ರಿಂದ ಈವರೆಗೆ ತೊರವಿಗಲ್ಲಿಯ ಖಬರಸ್ಥಾನದಲ್ಲಿ ಶವ ಸಂಸ್ಕಾರಗಳಲ್ಲಿ ಪಾಲ್ಗೊಂಡವರು ಕೊರೋನಾ ಸಹಾಯವಾಣಿ 1077ಕ್ಕೆ ಸಂಪರ್ಕಿಸಬೇಕು. ಇಲ್ಲವೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ಹಾಜರಾಗಿ ಪರೀಕ್ಷೆಗೆ ಒಳಪಡಬೇಕೆಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.