ಹೊಸ ದಿಗಂತ ವರದಿ, ವಿಜಯಪುರ:
ಮೊನ್ನೆ ಶ್ರೀಗಂಧ ಗಿಡದ ಕಳ್ಳತನ ನೆಪದಲ್ಲಿ ನಮ್ಮ ಮನೆ ಆವರಣಕ್ಕೆ ನುಗ್ಗಿದ್ದ ದುಷ್ಕರ್ಮಿಗಳು ನನಗೆ ಜೀವ ಬೆದರಿಕೆ ಹಾಕಿದ್ದಾರೆ. ನನಗೆ, ನಮ್ಮ ಕುಟುಂಬಕ್ಕೆ ಏನಾದರೂ ಹೆಚ್ಚು, ಕಡಿಮೆ ಆದರೆ, ಜಿಲ್ಲಾಡಳಿತ ಹಾಗೂ ಸರ್ಕಾರಗಳೆ ಹೊಣೆ ಎಂದು ನಾಗಠಾಣ ಶಾಸಕ ದೇವಾನಂದ ಚವ್ಹಾಣ ಗಂಭೀರ ಆರೋಪ ಮಾಡಿದ್ದಾರೆ.
ಈಚೆಗೆ ನಮ್ಮ ಮನೆಯ ಕಾಂಪೌಂಡಗೆ ಹೊಂದಿಕೊಂಡಿದ್ದ ಶ್ರೀಗಂಧ ಗಿಡ ಕಳ್ಳತನಕ್ಕೆ ಬಂದು, ಮಧ್ಯೆ ರಾತ್ರಿ ನಮ್ಮ ಮನೆಯ ಆವರಣಕ್ಕೆ ನುಗ್ಗಿ, ತಾವು ಮಹಾದೇವ ಸಾಹುಕಾರ ಕಡೆಯವರು ಎಂದು ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ. ಆಗ ಆದರ್ಶನಗರ ಠಾಣೆಗೆ ತಿಳಿಸುತ್ತಿದ್ದಂತೆ, ದುಷ್ಕರ್ಮಿಗಳು ಓಡಿ ಹೋಗಿದ್ದಾರೆ. ಅಲ್ಲದೆ ಕೆಲ ದಿನಗಳ ಹಿಂದೆ, ನಮ್ಮ ಆಪ್ತರ ಬಳಿ ನನ್ನ ಕುರಿತು ಮಾಹಿತಿ ಪಡೆದುಕೊಂಡು, ಜೀವಬೆದರಿಕೆ ಹಾಕಿದ್ದಾರೆ. ಇದೆಲ್ಲ ನೋಡಿದರೆ, ನನ್ನ ವಿರುದ್ಧ ದುಷ್ಕರ್ಮಿಗಳು ಸಂಚು ರೂಪಿಸುತ್ತಿದ್ದಾರೆ ಎನ್ನುವುದು ತಿಳಿದು ಬರುತ್ತಿದೆ. ಇದರ ಹಿಂದೆ ಯಾರು ಇದ್ದಾರೆ ಎನ್ನುವುದು ಗೊತ್ತಿಲ್ಲ. ಆದರೆ ನಾನು ಶಾಸಕನಾದ ಬಳಿಕ, ಈ ಭಾಗದಲ್ಲಿ ನಡೆಯುತ್ತಿದ್ದ ಮರಳು ಮಾಫಿಯಾ, ಗಾಂಜಾ, ಅಫೀಮ, ಗುಟ್ಕಾ, ಮಾವಾಗಳನ್ನು ಅಕ್ರಮ ದಂಧೆಯನ್ನು ಬಂದ್ ಮಾಡಿಸಿದ್ದೇ, ಅನಂತರ ಹೊಸ ಸರ್ಕಾರ ಬಂದ ಬಳಿಕ, ಈ ಅಕ್ರಮ ದಂಧೆಗಳು ಮತ್ತೆ ಆರಂಭಗೊಂಡಿರುವುದನ್ನು ವಿರೋಧಿಸಿದ್ದಕ್ಕೆ ಜೀವ ಬೆದರಿಕೆ ಹಾಕಲಾಗುತ್ತಿದೆ ಎನ್ನುವ ಅನುಮಾನ ಮೂಡುತ್ತಿದೆ. ಈ ಕುರಿತು ಲಿಖಿತ ರೂಪದಲ್ಲಿ ನಾಳೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡುತಿದ್ದೇನೆ. ನನ್ನ ಹಾಗೂ ನಮ್ಮ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.