ಮಂಗಳೂರು: ನವರಾತ್ರಿ ಹಬ್ಬದ ಸಂದರ್ಭ ಯಾವುದೇ ಶಾಲೆಗಳಲ್ಲಿ ಆನ್ಲೈನ್ ಪರೀಕ್ಷೆ ಅಥವಾ ಬೇರೆ ಯಾವುದೇ ಪರೀಕ್ಷೆಗಳನ್ನು ಹಮ್ಮಿಕೊಳ್ಳಬಾರದು ಎಂದು ಶಾಸಕ ಡಾ.ವೈ ಭರತ್ ಶೆಟ್ಟಿ ಸ್ಥಳೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನವರಾತ್ರಿ ಸಂದರ್ಭ ಈಗಾಗಲೇ ಆನ್ಲೈನ್ ಪರೀಕ್ಷೆಗೆ ಸಂಬಂಧಪಟ್ಟಂತೆ ಕೆಲವೊಂದು ಶಾಲೆಗಳು ಹಮ್ಮಿಕೊಂಡಿದ್ದು ನನ್ನ ಗಮನಕ್ಕೆ ಬಂದಿದೆ. ಪೋಷಕರಿಂದಲೂ ದೂರು ಬಂದಿದ್ದು , ಈ ನಿಟ್ಟಿನಲ್ಲಿ ಹಬ್ಬದ ಸಂದರ್ಭ ಪರೀಕ್ಷೆಗಳು ಬೇಡ ಎಂದು ಸೂಚಿಸಿದ್ದಾರೆ. ಕೊರೋನಾ ದಿಂದ ಕಟ್ಟುನಿಟ್ಟಾದ ಆದೇಶದ ಬಳಿಕ ಮೊದಲ ಬಾರಿಗೆ ನವರಾತ್ರಿ ಹಬ್ಬವನ್ನು ಕೌಟುಂಬಿಕವಾಗಿ ಆಚರಿಸಲು ಅನುಮತಿ ಸಿಕ್ಕಿದೆ. ಹೀಗಾಗಿ ಶಾಲೆಯ ಆಂತರಿಕ ಪರೀಕ್ಷೆಗಳನ್ನು ಹಬ್ಬ ಮುಗಿದ ಬಳಿಕ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಗೂ ಮನವಿ ಮಾಡಿದ್ದೇನೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹೀಗಾಗಿ ಶಾಲೆಯ ಆಡಳಿತ ಮಂಡಳಿಗಳು ಈಗಾಗಲೇ ವಿದ್ಯಾರ್ಥಿಗಳಿಗೆ ನೀಡಿರುವ ಸೂಚನೆಗಳನ್ನು ಹಿಂಪಡೆಯಬೇಕು ಎಂದು ಸೂಚಿಸಿದ್ದಾರೆ.