ಮದ್ದೂರು : ನಾಗಮಂಗಲ ಕ್ಷೇತ್ರದ ಶಾಸಕ ಕೆ. ಸುರೇಶ್ಗೌಡ ಅವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ಅಧಿಕಾರಿಗಳು, ರಾಜಕೀಯ ಮುಖಂಡರು ಸೇರಿದಂತೆ ನೂರಾರು ಮಂದಿಗೆ ಆತಂಕ ಶುರುವಾಗಿದೆ.
ತಲೆನೋವು, ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಸುರೇಶ್ಗೌಡ ಅವರು ಸ್ವಯಂಪ್ರೇರಿತರಾಗಿ ಬೆಂಗಳೂರಿನಲ್ಲಿ ಗಂಟಲದ್ರವ ಪರೀಕ್ಷೆಗೆ ಒಳಗಾಗಿದ್ದರು. ಪರೀಕ್ಷೆಯಲ್ಲಿ ಕೊರೋನಾ ಸೋಂಕು ಇರುವುದು ಪತ್ತೆಯಾಗಿತ್ತು. ಶಾಸಕರ ಕಾರು ಚಾಲಕನಿಗೂ ಸೋಂಕು ಇರುವುದು ದೃಢಪಟ್ಟಿದೆ.
ಕಳೆದ ಗುರುವಾರವಷ್ಟೇ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಶಾಸಕ ಸುರೇಶ್ಗೌಡ ಅವರು, ಅಧಿಕಾರಿಗಳು, ಮುಖಂಡರ ಸಭೆ ನಡೆಸಿದ್ದರು. ಮದುವೆ, ಗೃಹ ಪ್ರವೇಶದಲ್ಲಿ ಭಾಗಿಯಾಗಿದ್ದರು. ಇಬ್ಬರು ಜೆಡಿಎಸ್ ಮುಖಂಡರ ಮನೆಗಳಿಗೂ ಭೇಟಿ ನೀಡಿದ್ದರು. ಈ ಹಿನ್ನಲೆಯಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ.
ಮದ್ದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಗರ್ ಹುಕುಂ ಸಮಿತಿ ಸಭೆಯನ್ನೂ ನಡೆಸಿದ್ದರು. ಸಭೆಯಲ್ಲಿ ತಹಸೀಲ್ದಾರ್ ಸೇರಿದಂತೆ ಇತರೆ ಅಧಿಕಾರಿಗಳೂ ಭಾಗವಹಿಸಿದ್ದರು. ಶುಕ್ರವಾರ ವರಲಕ್ಷ್ಮಿ ಹಬ್ಬದ ಹಿನ್ನಲೆಯಲ್ಲಿ ಮನೆಯಲ್ಲೇ ಇದ್ದರು. ಮದ್ದೂರಿನ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ ತೆರಳಿದ ಬಳಿಕ ಅವರಿಗೆ ಪಾಸಿಟೀವ್ ಬಂದಿದೆ. ಇದು ಸಹಜವಾಗಿ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು, ಮಾಧ್ಯಮದವರು ಪರೀಕ್ಷೆಗೆ ಒಳಪಡಬೇಕು ಎಂಬುದು ಹಲವರ ಅಭಿಪ್ರಾಯವಾಗಿದೆ.