ಬೆಂಗಳೂರು: ಪಾಕ್ ಪರ ಘೋಷಣೆ ಕೂಗಿ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದ ಅರುದ್ರಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಇದರ ವಿಚಾರಣೆಯನ್ನು 6ನೇ ಎಸಿಎಂಎಂ ಕೋರ್ಟ್ ಮಾ.2ಕ್ಕೆ ಮುಂದೂಡಿದೆ.
ಫೆ.೨೧ರಂದು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗುವ ಮೂಲಕ ವಿವಾದ ಸೃಷ್ಟಿಸಿದ್ದ ಅಮೂಲ್ಯ ಲಿಯೋನಾ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ನಗರದ ಟೌನ್ ಹಾಲ್ ಬಳಿ ಹಿಂದೂ ಪರ ಸಂಘಟನೆಗಳು ಅಮೂಲ್ಯ ವಿರುದ್ಧ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮತ್ತೋರ್ವ ಯುವತಿ ಪಾಕ್ ಪರ ಘೋಷಣೆ ಕೂಗಿದ್ದಾಳೆ ಎಂಬ ಆರೋಪ ಕೇಳಿ ಬಂದಿತ್ತು. ಘೋಷಣೆ ಕೂಗಿದಾಕೆಯನ್ನು ಅರುದ್ರಾ ಎಂದು ಗುರುತಿಸಲಾಗಿತ್ತು.
ಪಾಕ್ ಪರ ಘೋಷಣೆ ಆರೋಪದಲ್ಲಿ ಅರುದ್ರಾಗೆ 14 ದಿನ ನ್ಯಾಯಾಂಗ ಬಂಧನ ವಿಽಸಲಾಗಿತ್ತು. ಮಾ.5ರವೆಗೂ ನ್ಯಾಯಾಂಗ ಬಂಧನದಲ್ಲಿರುವ ಅರುದ್ರಾಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು.
ಫೆ.29 ಶನಿವಾರ ವಿಚಾರಣೆ ಸಂದರ್ಭ ಸರ್ಕಾರಿ ಅಭಿಯೋಜಕರು, ಅಮೂಲ್ಯ ಹಾಗೂ ಅರುದ್ರಾ ಎರಡು ಪ್ರಕರಣಗಳು ಒಂದಕ್ಕೊಂದು ಸಂಬಂಧವಿದೆ. ಹೀಗಾಗಿ ತನಿಖಾ ವರದಿ ಮೇಲೆ ವಾದ ಮಂಡಿಸಲು ಕಾಲಾವಕಾಶ ಬೇಕು ಎಂದು ಮನವಿ ಮಾಡಿದ್ದರೆ, ಅರುದ್ರಾ ಪರ ವಕೀಲರು, ಸುಪ್ರೀಂಕೋರ್ಟ್ ಆದೇಶದಂತೆ ಒಂದು ವಾರದಲ್ಲಿ ಜಾಮೀನು ಅರ್ಜಿ ಇತ್ಯರ್ಥವಾಗಬೇಕು. ಹಾಗಾಗಿ ವಾದಕ್ಕೆ ಕಾಲಾವಕಾಶ ನೀಡದಂತೆ ಮಂಡಿಸಿದ್ದರು. ವಾದ-ಪ್ರತಿವಾದ ಆಲಿಸಿ ನ್ಯಾಯದೀಶರು, ಪ್ರಕರಣ ಮುಂದೂಡಿದ್ದಾರೆ.