ಪೊನ್ನಂಪೇಟೆ: ತಾಲೂಕು ಪಂಚಾಯಿತಿ ಸದಸ್ಯ ಪಲ್ವಿನ್ ಪೂಣಚ್ಚ ಮತ್ತು ಶ್ರೀಮಂಗಲದ ಐ. ಸಂಜು ಅವರ ನಡುವೆ ನಡೆದಿರುವ ಹಲ್ಲೆ ಪ್ರಕರಣ ವೈಯಕ್ತಿಕವಾಗಿದ್ದು, ಈ ಪ್ರಕರಣಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಈ ಪ್ರಕರಣದಲ್ಲಿ ಬಿಜೆಪಿ ಮತ್ತು ಸರಕಾರದ ವಿರುದ್ಧ ಕಾಂಗ್ರೆಸ್ ಪಕ್ಷ ಮಾಡುತ್ತಿರುವ ಟೀಕೆ ಮತ್ತು ಪ್ರತಿಭಟನೆ ಖಂಡನೀಯ ಎಂದು ವೀರಾಜಪೇಟೆ ಕ್ಷೇತ್ರ ಬಿಜೆಪಿ ಉಪಾಧ್ಯಕ್ಷ ಮಚ್ಚಮಾಡ ಸುಮಂತ್ ಅವರು ಹೇಳಿದ್ದಾರೆ.
ಶ್ರೀಮಂಗಲದಲ್ಲಿ ಪಕ್ಷದ ಪ್ರಮುಖರು ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಸೋಮವಾರ ಶ್ರೀಮಂಗಲದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಬಹಿರಂಗ ಪ್ರತಿಭಟನೆಯಲ್ಲಿ ತಾ.ಪಂ. ಸದಸ್ಯ ಪಲ್ವಿನ್ ಪೂಣಚ್ಚ ಅವರ ಮೇಲೆ ಪ್ರಕರಣ ದಾಖಲಿಸಲು ಆಡಳಿತ ಪಕ್ಷ ಬಿಜೆಪಿ ಹಾಗೂ ಬಿಜೆಪಿ ಸರಕಾರ ಕುಮ್ಮಕ್ಕು ನೀಡಿದೆ ಎಂದು ಆರೋಪಿಸಲಾಗಿದೆ. ಇದು ಸರಿಯಲ್ಲ. ಈ ಪ್ರಕರಣದಲ್ಲಿ ನಮ್ಮ ಪಕ್ಷದಿಂದ ಪೊಲೀಸ್ ಇಲಾಖೆಯ ಮೇಲೆ ಯಾವುದೇ ಹಸ್ತಕ್ಷೇಪ ನಡೆದಿಲ್ಲ ಎಂದು ಪುನರುಚ್ಚರಿಸಿದರು.
ಶ್ರೀಮಂಗಲ ಗ್ರಾ.ಪಂ. ಸದಸ್ಯ ಅಜ್ಜಮಾಡ ಜಯ ಅವರು ಮಾತನಾಡಿ, ತಾ.ಪಂ ಸದಸ್ಯ ಪಲ್ವಿನ್ ಪೂಣಚ್ಚ ಮತ್ತು ಐ ಸಂಜು ಅವರ ಪ್ರಕರಣ ಹಣಕಾಸು ವಿಷಯಕ್ಕೆ ಸಂಬಂಧಿಸಿದ್ದೆಂದು ತಿಳಿದು ಬಂದಿದೆ. ಬಿಜೆಪಿ ಪಕ್ಷದಿಂದ ಇಂತಹ ವಿಷಯಕ್ಕೆ ಬೆಂಬಲ ನೀಡುವುದಿಲ್ಲ. ಆಡಳಿತ ಪಕ್ಷ ಮತ್ತು ಸರಕಾರದ ವಿರುದ್ದ ಕಾಂಗ್ರೆಸ್ ಆರೋಪಿಸಿದ ತೇಜೋವಧೆ ಮಾಡುವುದು ಸರಿಯಲ್ಲ. ಈ ಪ್ರಕರಣದಲ್ಲಿ ಪೊಲೀಸರು ಸ್ವತಂತ್ರವಾಗಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ ಎಂದು ಹೇಳಿದರು.
ಸಭೆಯಲ್ಲಿ ಶ್ರೀಮಂಗಲ ಗ್ರಾ.ಪಂ. ಉಪಾಧ್ಯಕ್ಷ ಕಳ್ಳಂಗಡ ರಜತ್ ಪೂವಣ್ಣ, ಗ್ರಾ.ಪಂ. ಸದಸ್ಯ ಚೋನಿರ ಕಾಳಯ್ಯ, ಸ್ಥಾನೀಯ ಸಮಿತಿ ಮಾಜಿ ಅಧ್ಯಕ್ಷ ಕಾಳಿಮಾಡ ತಮ್ಮು ಮುತ್ತಣ್ಣ, ಮಾಜಿ ಕಾರ್ಯದರ್ಶಿ ಬಾಚಂಗಡ ದಾದ ದೇವಯ್ಯ ಇದ್ದರು.