ಹೊಸದಿಗಂತ ವರದಿ, ಮಂಗಳೂರು:
ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡ ದಿಟ್ಟ ನಿರ್ಧಾರದಿಂದ ದೇಶದಲ್ಲಿ ಕೊರೋನಾ ನಿಯಂತ್ರಣಕ್ಕೆ ಬರುತ್ತಿದೆ. ಕೊರೋನಾ ಬಳಿಕ ಎದುರಾದ ಸವಾಲುಗಳನ್ನು ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರಗಳು ಯಶಸ್ವಿಯಾಗಿ ನಿಭಾಯಿಸಿವೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.
ನಗರದಲ್ಲಿ ನಡೆಯುತ್ತಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ವ್ಯವಸ್ಥಿತ ಆಡಳಿತ ಸುಧಾರಣೆ ಕ್ರಮಗಳ ಮೂಲಕ ಕೊರೋನಾ ಸಂದರ್ಭದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಸಂಕಷ್ಟ ಸಮಯದಲ್ಲಿ ಒಬ್ಬ ನಾಯಕ ನಡೆದುಕೊಳ್ಳುವ ರೀತಿ ಆತನ ಸಾಮರ್ಥ್ಯವನ್ನು ತಿಳಿಸುತ್ತದೆ. ಮೋದಿ ಮತ್ತು ಯಡಿಯೂರಪ್ಪ ಅವರಿಬ್ಬರೂ ಉತ್ತಮ ಆಡಳಿತ ನೀಡಿಕೆಗೆ ಉದಾಹರಣೆಯಾಗಿ ನಮ್ಮ ಮುಂದಿದ್ದಾರೆ ಎಂದರು.
೧೩೦ ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಕೊರೋನಾ ನಿಯಂತ್ರಣ ಸುಲಭವಲ್ಲ. ಆದರೆ, ಮೋದಿ ಸರಕಾರ ಸವಾಲು ಸ್ವೀಕರಿಸಿ ಯಶಸ್ವಿಯಾಗಿದೆ. ವಿಶ್ವಬ್ಯಾಂಕ್ ಅಂಕಿಅಂಶ ಪ್ರಕಾರ ಭಾರತದಲ್ಲಿ ೧೦ ಲಕ್ಷ ಜನರ ಪೈಕಿ ೫೫೦೦ ಸಾವಿರ ಮಂದಿಗೆ ಕೊರೋನಾ ಬಾಧಿಸಿದೆ. ಆದರೆ, ಅಮೆರಿಕಾ, ಬ್ರೆಜಿಲ್ನಂತಹ ದೇಶದಲ್ಲಿ ೧೦ ಲಕ್ಷ ಜನರ ಪೈಕಿ ೨೫೦೦೦ ಮಂದಿ ಕೊರೋನಾ ಸೋಂಕಿಗೆ ಒಳಗಾಗಿದ್ದರು. ಭಾರತದಲ್ಲಿ ಕೊರೋನಾ ಸಾವಿನ ದರ ೧೦ ಲಕ್ಷ ಜನರಿಗೆ ೮೩ ಆಗಿದೆ. ಬ್ರಿಟನ್, ಸ್ಪೈನ್, ಅಮೆರಿಕದಲ್ಲಿ ಈ ದರ ೪೯೦ರಿಂದ ೬೨೦ರಷ್ಟಿದೆ. ಈ ಅಂಕಿ ಅಂಶ ಭಾರತದಲ್ಲಿ ಕೊರೋನಾ ಹತೋಟಿಯಲ್ಲಿದೆ ಎಂಬುದರ ಸೂಚಕವಾಗಿದೆ. ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ಕೊರೋನಾ ನಿಯಂತ್ರಣಕ್ಕೆ ಮೋದಿ ಸರಕಾರದ ದಿಟ್ಟ ನಿರ್ಧಾರಗಳೇ ಕಾರಣವಾಗಿವೆ ಎಂದು ಡಿವಿಎಸ್ ಹೇಳಿದರು.